ಪತ್ನಿ ಕಾಣೆಯಾಗಿದ್ದಾಳೆಂದು ಪತಿಯಿಂದ ದೂರು-ನಾಯಿಗಳು ಬಿಡಿಸಿದ ಕೊಲೆ ರಹಸ್ಯ-ಕೊಲೆಗಾರ ಪತಿ ಬಂಧನ

ಮಂಗಳೂರು(ಸಕಲೇಶಪುರ): ಪತ್ನಿಯನ್ನು ಕೊಲೆಗೈದು ನಾಪತ್ತೆಯಾಗಿದ್ದಾಳೆ ಎಂದು ದಾಖಲಾಗಿದ್ದ ದೂರಿನ  ಬೆನ್ನುಬಿದ್ದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮೂರು ತಿಂಗಳ ಹಿಂದೆ ಪತಿಯೇ ತನ್ನ ಪತ್ನಿಯನ್ನು ಕೊಂದು ಹೂತು ಹಾಕಿರುವುದನ್ನು ಪತ್ತೆ ಮಾಡಿದ್ದಾರೆ.

ಮೂರು ತಿಂಗಳ ಹಿಂದೆ ಶಾಂತಿವಾಸು (29) ಎಂಬ ಮಹಿಳೆ ದಿಢೀರ್ ನಾಪತ್ತೆಯಾಗಿದ್ದಳು. ನ.2ರಂದು ಮನೆಯ ಪಕ್ಕದ ಗುಂಡಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ನಾಯಿಗಳು ಮೃತದೇಹದ ಮೂಳೆಗಳನ್ನು ಎಳೆದು ತಂದಿದ್ದು, ಆಕೆಯ ಪತಿ ಪವನ್ ಕುಮಾರನೇ ಪತ್ನಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪವನ್ ಕುಮಾರ್ ಹಾಗೂ ಶಾಂತಿವಾಸು ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೆ ಪವನ್ ಹಲ್ಲೆ ಮಾಡಿದ್ದ. ಈ ವೇಳೆ ಪತ್ನಿ ಸಾವಿಗೀಡಾಗಿದ್ದಾಳೆ. ಬಳಿಕ ಆಕೆಯನ್ನು ಮನೆಯ ಪಕ್ಕದಲ್ಲಿ ಗುಂಡಿ ತೆಗೆದು ಹೂತು ಹಾಕಿದ ನಂತರ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದ. ಬಳಿಕ ತನ್ನ ಪತ್ನಿ ಕಳೆದು ಹೋಗಿದ್ದಾಳೆ ಎಂದು ಪವನ್ ಹಾಗೂ ಶಾಂತಿವಾಸು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಸಕಲೇಶಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here