ಅಂತ್ಯ ಸಂಸ್ಕಾರಕ್ಕೆ ಹಣದ ಕೊರತೆ – ತಾಯಿಯ ಶವದೊಂದಿಗೆ ದಿನಗಳನ್ನು ಕಳೆದ ಇಬ್ಬರು ಪುತ್ರಿಯರು- ವರ್ಷದ ಬಳಿಕ ಪ್ರಕರಣ ಬೆಳಕಿಗೆ

ಮಂಗಳೂರು (ವಾರಾಣಸಿ): ಉಷಾ ತಿವಾರಿ (52 ವ) ವರ್ಷದ ಹಿಂದೆ ಮೃತ ಪಟ್ಟಿದ್ದು, ಅಂತ್ಯಸಂಸ್ಕಾರ ಮಾಡಲು ಹಣವಿಲ್ಲದೆ ಆಕೆಯ ಮಕ್ಕಳಾದ ಪಲ್ಲವಿ (27) ಮತ್ತು ಆಕೆಯ ಸಹೋದರಿ ವೈಶ್ವಿಕಿ (18) ವರ್ಷದಿಂದ ಮೃತದೇಹದೊಂದಿಗೆ ದಿನಗಳನ್ನು ಕಳೆದಿರುವ ಕರುಣಾಜನಕ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯರ ಮಾಹಿತಿ ಆಧರಿಸಿ ಬಾಗಿಲು ಒಡೆದು ಮನೆಯನ್ನು ಪ್ರವೇಶಿಸಿದ ಪೊಲೀಸರಿಗೆ ಇಬ್ಬರು ಯುವತಿಯರು ತಮ್ಮ ತಾಯಿಯ ಅಸ್ಥಿಪಂಜರವಾಗಿದ್ದ ಮೃತದೇಹದ ಜತೆ ಪತ್ತೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರಕ್ಕೆ ತಮ್ಮ ಬಳಿ ಹಣವಿರಲಿಲ್ಲ ಎಂದು ಸಹೋದರಿಯರು ಪೊಲೀಸರಿಗೆ ತಿಳಿಸಿದ್ದಾರೆ.

ಸಹೋದರಿಯರಿಬ್ಬರು ಮಾನಸಿಕವಾಗಿ ಅಸ್ಥಿರರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಾರಾಣಸಿಯ ಲಂಕಾದ ಮದೇರ್ವ ಚಿತ್ತೂಪುರ ಪ್ರದೇಶದಲ್ಲಿ ಈ ಕುಟುಂಬ ವಾಸಿಸುತ್ತಿದೆ. ಅವರ ತಂದೆ ಬಲ್ಲಿಯಾದಲ್ಲಿ ವಾಸಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ತಂದೆಯನ್ನು ಭೇಟಿ ಮಾಡಿಲ್ಲ ಎಂದು ಸಹೋದರಿಯರು ಹೇಳಿದ್ದಾರೆ. ಪದೇಪದೆ ಮನೆ ಬಾಗಿಲು ಬಡಿದರೂ ಯಾರೂ ತೆರೆಯುತ್ತಿಲ್ಲ ಎಂದು ಮೃತ ಮಹಿಳೆಯ ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ, ಮನೆಯ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದೆ. ಈ ವೇಳೆ ಒಂದು ಕೋಣೆಯಲ್ಲಿ ಮಹಿಳೆಯ ಅಸ್ಥಿಪಂಜರ ಮತ್ತು ಇನ್ನೊಂದು ಕೋಣೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಕುಳಿತಿರುವುದು ಪತ್ತೆಯಾಗಿದೆ.  ಈ ಎಲ್ಲ ದೃಶ್ಯಗಳು ಪೊಲೀಸರ ಕ್ಯಾಮರಾದಲ್ಲಿ ಸೆರೆಯಾಗಿದೆ.

ದುರ್ವಾಸನೆಯ ನಡುವೆಯೂ ಮನೆಯಲ್ಲಿ ಹೇಗೆ ವಾಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ದೇಹವನ್ನು ಬಟ್ಟಯಿಂದ ಮುಚ್ಚಿ, ಟೆರೇಸ್ ಮೇಲೆ ಹೋಗುತ್ತಿದ್ದೆವು ಎಂದು ಯುವತಿಯರು ಪೊಲೀಸರಿಗೆ ತಿಳಿಸಿದ್ದಾರೆ. ಪಲ್ಲವಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ವೈಶ್ವಿಕಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹುಡುಗಿಯರು ಮನೆಯಿಂದ ಹೊರಗೆ ಮತ್ತು ಒಳಗೆ ಎಂದಿನಂತೆಯೇ ಓಡಾಡಿಕೊಂಡು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅಸ್ಥಿಪಂಜರವನ್ನು ಸ್ಥಳಾಂತರಿಸಲಾಗಿದೆ ಎಂದು ಲಂಕಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕಾಂತ್ ಮಿಶ್ರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here