ಬಿಜೆಪಿ ಪದಾಧಿಕಾರಿಗಳ ನೇಮಕ-ಬೇಸರ ವ್ಯಕ್ತಪಡಿಸಿದ ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ

ಮಂಗಳೂರು(ಬೆಂಗಳೂರು): ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕದ ಕುರಿತು ಬಿಜೆಪಿಯ ಹಿರಿಯ ನಾಯಕ ಡಿವಿ ಸದಾನಂದ ಗೌಡ ಅಸಮಾಧಾನ ಹೊರಹಾಕಿದ್ದಾರೆ.

ಡಿ.24ರಂದು ಈ ಕುರಿತು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಡಿ.ವಿ.ಸದಾನಂದಗೌಡ, ಈಗ ನೇಮಕವಾಗಿರುವ ಪದಾಧಿಕಾರಿಗಳ ತಂಡವನ್ನು ಅಸಮರ್ಥರೆಂದು ಹೇಳಲ್ಲ. ಆದರೆ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ರಾಜ್ಯದ ಹಿರಿಯ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಹೊಸ ತಂಡ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆಯ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ಇನ್ನೂ, ರಾಜ್ಯದ ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ, ಉತ್ತರ ಭಾಗಕ್ಕೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಆಗುವಾಗ ಸಮಾನವಾಗಿ ನೇಮಕ ಆಗಬೇಕು. ಅದು ಒಂದು ಗುಂಪಿಗೆ ಸೀಮಿತ ಆಗಬಾರದು. ಹೊಸದಿಲ್ಲಿಯಲ್ಲಿ ಕುಳಿತು ತೀರ್ಮಾನ ಮಾಡುವುದು ಸರಿಯಲ್ಲ. ಕೋರ್ ಕಮಿಟಿ ಹಿರಿಯರ ತಂಡವಾಗಿದ್ದು, ಕಮಿಟಿ ಜೊತೆ ಚರ್ಚಿಸಿ ತೀರ್ಮಾನ ಆಗಿದ್ದರೆ, ಇನ್ನೂ ಸದೃಢವಾದ ತಂಡ ಕಟ್ಟಲು ಸಾಧ್ಯವಾಗಬಹುದಿತ್ತು ಎಂದು ಅವರು ಹೇಳಿದರು. ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿ ಸೋಲಿನ ಬಗ್ಗೆ ಇನ್ನೂ ಆತ್ಮಾವಲೋಕನವನ್ನೆ ಮಾಡಿಲ್ಲ. ಮೊದಲು ಈ ಕೆಲಸವನ್ನು ವರಿಷ್ಠರು ಹಿರಿಯ ನಾಯಕರ ಜೊತೆ ಮಾತಾಡಬೇಕಿತ್ತು ಎಂದು ಸದಾನಂದಗೌಡ ಹೇಳಿದ್ದಾರೆ.

LEAVE A REPLY

Please enter your comment!
Please enter your name here