ಹೂ‌ವು ಕಿತ್ತ ಅಂಗನವಾಡಿ ಮಕ್ಕಳು- ಅಂಗನವಾಡಿ‌ ಸಹಾಯಕಿ ಮೂಗು ಕತ್ತರಿಸಿದ ಮನೆ ಮಾಲೀಕ-ಸಾವು ಬದುಕಿನ ಹೋರಾಟದಲ್ಲಿ ಅಂಗನವಾಡಿ ಸಹಾಯಕಿ

ಮಂಗಳೂರು(ಬೆಳಗಾವಿ): ಹೊಸ ವರ್ಷದ ಆಚರಣೆ ವೇಳೆ ಮದ್ಯ ಸೇವಿಸಿ ನಶೆ ತಲೆಗೆ ಹತ್ತಿ ಮಿತ್ರನ ಮೂಗಿಗೆ ಕಚ್ಚಿದ ಘಟನೆಯ ನೆನಪು ಮಾಸುವ ಮುನ್ನ ಬೆಳಗಾವಿ ತಾಲೂಕಿನ ಬಸುರ್ಪೆ ಗ್ರಾಮದಲ್ಲಿ ಜ.1ರಂದು ಅಂಗನವಾಡಿಯ ಮಕ್ಕಳು ಮನೆಯ ಅಂಗಳದಲ್ಲಿನ‌ ಹೂ ಕಿತ್ತರು ಎಂಬ ಕಾರಣಕ್ಕೆ ಮನೆಯ ಮಾಲೀಕ ಅಂಗನವಾಡಿ‌ ಸಹಾಯಕಿಯ ಮೂಗನ್ನೇ ಕತ್ತರಿಸಿದ ಘಟನೆ ನಡೆದಿದೆ.

ಅಂಗನವಾಡಿ‌ ಸಹಾಯಕಿ‌ ಸುಗಂಧಾ ಮೋರೆ (50) ಎಂಬವರ ಮೂಗನ್ನು ಕಲ್ಯಾಣಿ ಮೋರೆ ಎಂಬಾತ ಕತ್ತರಿಸಿದ್ದು, ಪೊಲೀಸರು‌ ಇನ್ನೂ ಅರೋಪಿಯನ್ನು ಬಂಧಿಸಿಲ್ಲ ಎಂದು ಸಂತ್ರಸ್ತೆ ಕುಟುಂಬದವರು ದೂರಿದ್ದಾರೆ. ಸಹಾಯಕ್ಕಾಗಿ ಸಂತ್ರಸ್ತೆಯ ಕುಟುಂಬದವರು‌ ಮಾಧ್ಯಮಗಳಿಗೆ ಮಾಹಿತಿ‌ ನೀಡಿದ‌ ಬಳಿಕವಷ್ಟೇ ವಿಷಯ ಬಹಿರಂಗವಾಗಿದೆ. ಮೂಗು ಬಹುಪಾಲು‌ ಭಾಗ ಕತ್ತರಿಸಿದ್ದರಿಂದ ಮಹಿಳೆಯ ಶ್ವಾಸಕೋಶಕ್ಕೆ‌ ರಕ್ತ‌ ಹೋಗಿದ್ದು, ಅವರು ಸಾವು ಬದುಕಿನ ಮಧ್ಯೆ‌ ಹೋರಾಡುತ್ತಿದ್ದಾರೆ. ವಿಜಯ ಆಸ್ಪತ್ರೆಯಲ್ಲಿ‌ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ಕುಟುಂಬದವರು‌ ತಿಳಿಸಿದ್ದಾರೆ.

ಜ.1ರಂದು ಅಂಗನವಾಡಿ‌ ಮಕ್ಕಳು‌ ಆಟವಾಡುತ್ತ ಪಕ್ಕದ‌ ಮನೆಯ ಆವರಣದಲ್ಲಿ ಬೆಳೆದಿದ್ದ ಕೆಲವು‌ ಹೂಗಳನ್ನು ಕಿತ್ತಿದ್ದರು. ಇದರಿಂದ ಕೋಪಗೊಂಡ ಮನೆಯ ಮಾಲೀಕ ಕಲ್ಯಾಣಿ, ಮಕ್ಕಳನ್ನು‌ ಹೊಡೆಯಲು ಮುಂದಾಗಿದ್ದಾನೆ. ಮಧ್ಯೆ ಪ್ರವೇಶಿಸಿದ ಅಂಗವಾಡಿ‌ ಸಹಾಯಕಿ ಸುಗಂಧಾ, ಮಕ್ಕಳನ್ನು ಹೊಡೆಯದಂತೆ ತಕರಾರು‌ ಮಾಡಿದ್ದಾರೆ. ಕುಡಗೋಲು‌ ತೆಗೆದುಕೊಂಡು ಬಂದ ಆರೋಪಿ ಕಲ್ಯಾಣಿ ಏಕಾಏಕಿ‌ ಸುಗಂಧಾ ಅವರ ಮೇಲೆ ದಾಳಿ‌ ಮಾಡಿ ಅವರ‌ ಮೂಗು ಕತ್ತರಿಸಿದ ಎಂದು‌ ಜ.2ರಂದು ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರಿಗೆ ದೂರು‌ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಮೂಗಿನ ತುದಿಯ ಕೋಪದಲ್ಲಿ ಮೂಗು ಬಲಿಯಾಗಿದೆ.

 

LEAVE A REPLY

Please enter your comment!
Please enter your name here