ಲೈಂಗಿಕ ದೌರ್ಜನ್ಯ ಪ್ರಕರಣ-ದೇವೇಗೌಡರ ಮನೆಯಲ್ಲಿ ಆಶ್ರಯ ಪಡೆದಿದ್ದ ರೇವಣ್ಣ ಸೆರೆ

ಮಂಗಳೂರು(ಬೆಂಗಳೂರು): ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ಮಾಡಿದ್ದರು ಎಂಬ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ (65) ಅವರನ್ನು ಎಸ್‌ಐಟಿ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಎಚ್‌.ಡಿ. ರೇವಣ್ಣ ಗುರುವಾರದಿಂದಲೇ ತಲೆಮರೆಸಿಕೊಂಡಿದ್ದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತಂದೆ ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರ ಮನೆಯಲ್ಲಿ ರೇವಣ್ಣ ಆಶ್ರಯ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಸ್‌ಐಟಿ ಅಧಿಕಾರಿಗಳ ತಂಡ, ಮನೆಗೆ ತೆರಳಿ ರೇವಣ್ಣ ಅವರನ್ನು ಬಂಧಿಸಿದೆ. ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಎಚ್‌.ಡಿ. ರೇವಣ್ಣ, ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದರು. ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ನ್ಯಾಯಾಲಯ, ಶನಿವಾರ ಸಂಜೆ 5.30ರೊಳಗೆ ಎಸ್ಐಟಿ ಮುಂದೆ ಹಾಜರಾಗುವಂತೆ ಗಡುವು ನೀಡಿ, ಆದೇಶವನ್ನು ಕಾಯ್ದಿರಿಸಿತ್ತು. ರೇವಣ್ಣ ಎಸ್ಐಟಿ ಮುಂದೆ ಹಾಜರಾಗಲಿಲ್ಲ. ಗಡುವು ಮುಗಿಯುತ್ತಿದ್ದಂತೆ ಕೋರ್ಟ್‌ ಹಾಲ್‌ಗೆ ಬಂದ ನ್ಯಾಯಾಧೀಶರು, ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಪ್ರಕಟಿಸಿದ್ದರು.

ಅದರ ಬೆನ್ನಲ್ಲೇ, ದೇವೇಗೌಡರ ಮನೆಗೆ ದೌಡಾಯಿಸಿದ ಎಸ್ಐಟಿ ಅಧಿಕಾರಿಗಳು ಬಾಗಿಲು ಬಡಿದರು. 15 ನಿಮಿಷ ಬಾಗಿಲು ತೆಗೆಯಲಿಲ್ಲ. ಬಳಿಕ, ರೇವಣ್ಣ ಅವರೇ ಬಾಗಿಲು ತೆರೆದು ಹೊರಬಂದರು. ತಕ್ಷಣವೇ, ಅವರನ್ನು ವಶಕ್ಕೆ ಪಡೆದ ತನಿಖಾ ತಂಡ, ಸಿಐಡಿ ಕಚೇರಿಗೆ ಆವರಣದಲ್ಲಿರುವ ಎಸ್ಐಟಿ ಕಚೇರಿಗೆ ಕರೆತಂದು ವೈದ್ಯಕೀಯ ಪರೀಕ್ಷೆಯ ಬಳಿಕ, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಕೆ.ಆರ್. ನಗರದ ಸಂತ್ರಸ್ತೆ, ಎಚ್‌.ಡಿ. ರೇವಣ್ಣ ಅವರ ಮನೆಯಲ್ಲಿ ಕೆಲಸಕ್ಕಿದ್ದರು. ಇದೇ ಮಹಿಳೆ ಮೇಲೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಬಲವಂತದಿಂದ ಅತ್ಯಾಚಾರ ಎಸಗಿದ್ದಾರೆಂಬ ಆರೋಪವಿದೆ. ಈ ಕೃತ್ಯದ ವಿಡಿಯೊಗಳು ಪೆನ್‌ಡ್ರೈವ್‌ನಲ್ಲಿ ಹಲವರಿಗೆ ಹಂಚಿಕೆಯಾಗಿವೆ. ಕೃತ್ಯಕ್ಕೆ ಒಪ್ಪದ ಮಹಿಳೆ, ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುವ ದೃಶ್ಯಗಳು ವಿಡಿಯೊದಲ್ಲಿವೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹಂಚಿಕೆಯಾಗಿದ್ದವು. ಮಗ ಪ್ರಜ್ವಲ್‌ ರಕ್ಷಣೆಗೆ ಮುಂದಾಗಿದ್ದ ಎಚ್‌.ಡಿ.ರೇವಣ್ಣ ಹಾಗೂ ಇತರರು, ಸಂತ್ರಸ್ತೆಯನ್ನು ಏಪ್ರಿಲ್ 29ರಂದು ಅಪಹರಿಸಿದ್ದರು ಎಂಬುದಾಗಿ ಗೊತ್ತಾಗಿದೆ. ನಂತರ, ಹಲವು ಕಡೆಗಳಲ್ಲಿ ಅವರನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು. ಹಲ್ಲೆ ಸಹ ಮಾಡಿದ್ದರು. ತನ್ನ ತಾಯಿಯನ್ನು ಅಪಹರಿಸಲಾಗಿದೆ ಎಂದು ಸಂತ್ರಸ್ತೆಯ ಪುತ್ರ ಕೆ.ಆರ್. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸತೀಶ್ ಬಾಬಣ್ಣ ಎಂಬುವರನ್ನು ಬಂಧಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ರೇವಣ್ಣ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here