ದೂದ್ ಗಂಗಾ ನದಿಯಲ್ಲಿ ಮುಳುಗಿ ತಾಯಿ-ಮಗ ಸೇರಿ ನಾಲ್ವರ ಸಾವು 

ಮಂಗಳೂರು(ಚಿಕ್ಕೋಡಿ): ಮಹಾರಾಷ್ಟ್ರದ ದೂದ್ ಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ(ಮೇ.17) ಸಂಜೆ ಕೊಲ್ಲಾಪುರ ಜಿಲ್ಲೆಯ ಕಾಗಲ ತಾಲೂಕಿನ ಬಸ್ತವಾಡೆ ಸೇತುವೆ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಗಳಾದ ರೇಶ್ಮಾ ದಿಲಿಪ್​ ಏಳಮಲೆ (34) ಹಾಗೂ ಯಶ್ ದಿಲಿಪ್​ ಏಳಮಲೆ (17) ಮತ್ತು ಕೊಲ್ಹಾಪುರದ ಮುರಗುಡ ನಿವಾಸಿಯಾಗಿರುವ ಜಿತೇಂದ್ರ ಲೋಕರೆ (36) ಹಾಗೂ ಕೊಲ್ಹಾಪುರದ ರೂಕಡಿ ಗ್ರಾಮದ ನಿವಾಸಿ ಸವಿತಾ ಅಮರ ಕಾಂಬಳೆ (27) ಮೃತ ದುರ್ದೈವಿಗಳು.

ಕೊಲ್ಲಾಪುರ ಜಿಲ್ಲೆಯ ಕಾಗಲ್​ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆಂದು ಸಂಬಂಧಿಕರ ಮನೆಗೆ ಈ ನಾಲ್ವರು ತೆರಳಿದ್ದರು. ನದಿಯಲ್ಲಿ ಸ್ನಾನ ಹಾಗೂ ಬಟ್ಟೆ ತೊಳೆಯೋದಕ್ಕೆ ಎಂದು ನೀರಿಗಿಳಿದ ವೇಳೆ ದುರಂತ ಅಂತ್ಯವನ್ನು ಕಂಡಿದ್ದಾರೆ. ನೀರಿನಲ್ಲಿ ಮುಳುಗುವಾಗ ಒಬ್ಬರನ್ನೊಬ್ಬರನ್ನು ರಕ್ಷಿಸಲು ಹೋಗಿ ನಾಲ್ವರ ಸಾವು ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸತತ ಕಾರ್ಯಾಚರಣೆ ನಡೆಸಿ ನಾಲ್ವರ ಶವಗಳನ್ನು ಹೊರ ತೆಗೆದಿದ್ದಾರೆ. ಮಹಾರಾಷ್ಟ್ರ ಕಾಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here