ಮಂಗಳೂರು(ನವದೆಹಲಿ): ದಕ್ಷಿಣ ಭಾರತದಲ್ಲಿ ಮಳೆ ಶುರುವಾಗಿದ್ದರೂ ಉತ್ತರಭಾರತದಲ್ಲಿ ಮಾತ್ರ ವರುಣ ಇನ್ನೂ ಕೃಪೆ ತೋರಿಲ್ಲ. 47°C.ಗೆ ಏರಿಕೆಯಾಗಿರುವ ರಣಬಿಸಿಲಿಗೆ ಹೈರಾಣಾಗಿರುವ ಇಲ್ಲಿನ ಜನ ಬಿಸಿಲಿನ ತಾಪಕ್ಕೆ ಸಿಲುಕಿ ಬಸವಳಿದಿದ್ದಾರೆ. ಹೀಗಾಗಿಯೇ ಹವಾಮಾನ ಇಲಾಖೆ ದಿಲ್ಲಿ, ರಾಜಸ್ಥಾನ, ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶಗಳ ಕೆಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ ಐದು ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.ಈ ನಡುವೆ ರಾಜಸ್ಥಾನದಲ್ಲಿ ಯೋಧನೊಬ್ಬ ಮರಳಿನಲ್ಲಿ ಹಪ್ಪಳ ಸುಡುವ ಮೂಲಕ ಅಲ್ಲಿನ ತಾಪಮಾನದ ಬಗ್ಗೆ ಎಲ್ಲರ ಗಮನ ಸೆಳೆದಿದ್ದಾರೆ.
ರಾಜಸ್ಥಾನದ ಬಿಕಾನೆರ್ ನಲ್ಲಿ ಬಿಎಸ್ಎಫ್ ಯೋಧನೊಬ್ಬ ಸುಡು ಬಿಸಿಲಿನಲ್ಲಿ ಮರಳ ಮೇಲೆ ಹಪ್ಪಳ ಹುರಿದಿದ್ದಾರೆ. ಖಾಜುವಾಲದ ಬಳಿ ಇರುವ ಭಾರತ-ಪಾಕ್ ಗಡಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಪ್ರದೇಶದಲ್ಲಿ ರಣ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಇನ್ನು ಮರುಭೂಮಿಯಲ್ಲಿ ಯೋಧ ಕೈಯಲ್ಲಿ ಹಪ್ಪಳ ಹಿಡಿದು ಮರಳನ್ನು ಸರಿಸಿ, ಹಪ್ಪಳ ಇಟ್ಟು ಮರಳನ್ನು ಮುಚ್ಚುತ್ತಾರೆ. ಕ್ಷಣಾರ್ಧದಲ್ಲೇ ಹಪ್ಪಳ ರೋಸ್ಟ್ ಆಗುತ್ತದೆ. ಈ ಪ್ರಮಾಣದ ಬಿಸಿಲಿನಲ್ಲಿಯೂ ಬದ್ಧತೆಯಿಂದ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ. ಬಿಸಿಲಿನ ಝಳಕ್ಕೆ ಕುಲುಮೆಯಂತಿರುವ ಮರಳುಗಾಡಿನಲ್ಲಿ ತಾಯ್ನಾಡಿಗಾಗಿ ಸೇವೆಸಲ್ಲಿಸುತ್ತಿರುವ ಈ ಯೋಧರಿಗೆ ಒಂದು ಸಲಾಂ ಹೇಳಲೇಬೇಕು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/i/status/1793174881951195442