ಉಳ್ಳಾಲ ಕಡಲ್ಕೊರೆತಕ್ಕೆ ಸಮುದ್ರ ಪಾಲಾದ  ಮನೆ – ಮನೆಮಂದಿಯ ಸ್ಥಳಾಂತರ

ಮಂಗಳೂರು/ಉಳ್ಳಾಲ: ಕಡಲ್ಕೊರೆತಕ್ಕೆ ಮನೆಯೊಂದು ಸಮುದ್ರ ಪಾಲಾದ ಘಟನೆ ಉಚ್ಚಿಲ ಬಟ್ಟಪಾಡಿಯಲ್ಲಿ ಗುರುವಾರ ನಡೆದಿದ್ದು, ಇನ್ನು 3 ಮನೆ ಅಪಾಯದಲ್ಲಿರುವ ಘಟನೆ ವರದಿಯಾಗಿದೆ.

ಅಪಾಯದಂಚಿನಲ್ಲಿದ್ದ ಈ ಮನೆಯಲ್ಲಿ ನೆಲೆಸಿದ್ದ ಬೀಫಾತುಮ್ಮಾ ಅವರ ಕುಟುಂಬವನ್ನು ಜೂನ್ 26ರಂದೇ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಸಂಭವನೀಯ ಅಪಾಯ ತಪ್ಪಿದಂತಾಗಿದೆ. ಇನ್ನು ಈ ಪ್ರದೇಶದಲ್ಲಿ ಅಪಾಯದಂಚಿನಲ್ಲಿದ್ದ 3 ಮನೆಗಳ ಸದಸ್ಯರನ್ನು ಜೂನ್ 27ರಂದು ಅಧಿಕಾರಿಗಳು ಸ್ಥಳಾಂತರಿಸಿದ್ದರು. ಈ ಪ್ರದೇಶದಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಈಗಾಗಲೇ ಕೊಚ್ಚಿ ಹೋಗಿರುವ ಬೀಫಾತುಮ್ಮಾ ಅವರ ಮನೆಯ ಹಿಂಬದಿಯಲ್ಲೇ ಇರುವ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ. ಈ ಮನೆಗಳಿಗೂ ಕಡಲ ಅಲೆಗಳು ರಭಸವಾಗಿ ಅಪ್ಪಳಿಸುತ್ತಿದ್ದು, ಇವುಗಳು ಕೂಡ ಸಮುದ್ರಪಾಲಾಗುವ ಹಿನ್ನಲೆಯಲ್ಲಿ ಈ ಮನೆಯ ಸದಸ್ಯರನ್ನು ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ನಾಲ್ಕು ಮನೆಯ ಸದಸ್ಯರುಗಳು ಸದ್ಯ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದಾರೆ. ಶೀಘ್ರವೇ ಅವರುಗಳಿಗೆ ಪರ್ಯಾಯ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here