ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವ ಅಭಿಯಾನ ಪುನರಾರಂಭ – ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲು ನಿಗಮದ ಮಧ್ಯೆ ಹಂಚಿ ಹೋಗಿರುವ ಮಂಗಳೂರು

ಮಂಗಳೂರು/ಪುತ್ತೂರು: ರೈಲ್ವೇ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವ ಅಭಿಯಾನ ಮತ್ತೇ ವ್ಯಾಪಕವಾಗಿದೆ.

ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲು ನಿಗಮದ ಮಧ್ಯೆ ಹಂಚಿ ಹೋಗಿರುವುದರಿಂದ ಮಂಗಳೂರಿಗೆ ಪ್ರತ್ಯೇಕ ವಿಭಾಗ ಬೇಕಾಗಿದೆ. ಇದಕ್ಕಾಗಿ ರೈಲು ಪ್ರಯಾಣಿಕರು, ಸಂಘಟನೆಗಳು, ದಕ್ಷಿಣ ಕನ್ನಡ ಜಿಲ್ಲಾ ರೈಲ್ವೇ ಬಳಕೆದಾರರ ಸಮಿತಿಯ ನೇತೃತ್ವದಲ್ಲಿ ಸಹಿ ಅಭಿಯಾನ ಕೈಗೊಂಡಿದ್ದು, ಅ.2ರ ವರೆಗೂ ಮುಂದುವರಿಯಲಿದೆ. ಮಮತಾ ಬ್ಯಾನರ್ಜಿ ರೈಲು ಸಚಿವರಾಗಿದ್ದ ಸಂದರ್ಭದಲ್ಲಿ ಕೇಳಿ ಬಂದಿದ್ದ ಈ ಬೇಡಿಕೆ ಡಿ.ವಿ.ಸದಾನಂದ ಗೌಡ ಅವರು ರೈಲ್ವೇ ಸಚಿವರಾಗಿದ್ದಾಗಲೂ ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಬೇಡಿಕೆ ಈಡೇರಿರಲಿಲ್ಲ. ನಿಕಟಪೂರ್ವ ಸಂಸದರಾದ ನಳಿನ್‌ ಕುಮಾರ್‌ ಕಟೀಲು ಈ ಕುರಿತಾಗಿ ಹಲವು ಬಾರಿ ಬೇಡಿಕೆ ಪ್ರಸ್ತಾಪಿಸಿದ್ದರೂ ಕಾರ್ಯಗತಗೊಂಡಿರಲಿಲ್ಲ. ಹಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ರೈಲ್ವೇ ಮಂಡಳಿ ಈ ಬೇಡಿಕೆಗೆ ಮಣಿದಿಲ್ಲ. ಈಗ ಹೊಸದಾಗಿ ಚೇಂಜ್‌ ಒಆರ್‌ಜಿ ವೆಬ್‌ಸೈಟ್‌ ಮೂಲಕ ಇದಕ್ಕಾಗಿಯೇ ರೈಲ್ವೇ ಆಸಕ್ತರು ಸಹಿ ಅಭಿಯಾನ ಪ್ರಾರಂಭಿಸಿದ್ದಾರೆ.

ರಸ್ತೆ, ರೈಲ್ವೇ, ವಿಮಾನಯಾನ, ಜಲಸಾರಿಗೆ ಎಂಬ ಎಲ್ಲ ನಾಲ್ಕು ವಿ.ವಿಗಳ ಸಂಪರ್ಕಗಳನ್ನು ಹೊಂದಿದ ಏಕೈಕ ನಗರ ಮಂಗಳೂರು ಆಗಿದ್ದು, ಪ್ರಮುಖ ಕೈಗಾರಿಕಾ ಸಂಸ್ಥೆಗಳಾದ ಎಂ.ಸಿ.ಎಫ್‌, ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ, ಎಂ.ಆರ್‌.ಪಿ.ಎಲ್‌, ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸೇರಿ ಹಲವಾರು ಸಂಸ್ಥೆಗಳ ಕೇಂದ್ರ ಸ್ಥಾನ, ಫ್ಯಾಕ್ಟರಿಗಳು ಮಂಗಳೂರಿನಲ್ಲಿವೆ.

ಮಂಗಳೂರಿನ ನವಬಂದರಿನ ಮೂಲಕ ದಕ್ಷಿಣ ಭಾರತದಿಂದ ಹಲವಾರು ಉತ್ಪನ್ನಗಳು ರಫ್ತುಗೊಳ್ಳುತ್ತದೆ. ಕಚ್ಚಾತೈಲ ಸಹಿತ ಹಲವಾರು ಉತ್ಪನ್ನಗಳು ನವಮಂಗಳೂರು ಬಂದರಿನ ಮೂಲಕ ಆಮದುಗೊಳ್ಳುತ್ತದೆ. ಎನ್‌.ಐ.ಟಿ.ಕೆ. ಮಂಗಳೂರು ಸಹಿತ ಹಲವು ಎಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜುಗಳು ಇಲ್ಲಿವೆ. ಆದರೆ ರೈಲ್ವೇ ವಿಷಯದಲ್ಲಿ ಮಂಗಳೂರು ಬೇರೆ ಪ್ರಮುಖ ನಗರಗಳಿಂದ ಹಿಂದೆ ಬಿದ್ದಿದೆ. ಪ್ರತ್ಯೇಕ ರೈಲ್ವೇ ವಿಭಾಗವಿಲ್ಲದೆ, ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್‌ ವಿಭಾಗ, ನೈಋತ್ಯ ರೈಲ್ವೇ ವಲಯದ ಮೈಸೂರು ವಿಭಾಗ ಹಾಗೂ ಕೊಂಕಣ ರೈಲ್ವೆ ನಿಗಮದ ಮಧ್ಯೆ ಮಂಗಳೂರಿನ ರೈಲ್ವೇ ಜಾಲ ಹಂಚಿ ಹೋಗಿದೆ. ಇದರಿಂದ ಮಂಗಳೂರಿಗೆ ಸಿಗಬೇಕಾದ ಸೌಕರ್ಯಗಳು, ರೈಲ್ವೇ ಸೇವೆಗಳು ಇಲ್ಲವಾಗಿದೆ ಎನ್ನುವುದು ಸಮಿತಿಯ ಅನಿಸಿಕೆ.

ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಮಂಗಳೂರು ಸೆಂಟ್ರಲ್‌ ಹಾಗೂ ಜಂಕ್ಷನ್‌ ಅನ್ನು ಪ್ರಮುಖ ರೈಲ್ವೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು, ರಾಜ್ಯದ ಹಲವಾರು ನಗರಗಳಿಗೆ ಮಂಗಳೂರು ಸೆಂಟ್ರಲಿನಿಂದ ರೈಲು ಸೇವೆ ಆರಂಭಿಸಲು, ಅದನ್ನು ವಿಶ್ವ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗದ ನಿರ್ದೇಶಕ ಆಗಬೇಕಾಗಿದೆ. ಮಂಗಳೂರಿನಿಂದ ಮಡಗಾಂವ್‌ ತನಕ ಹಾಗೂ ಮಂಗಳೂರಿನಿಂದ ಸಕಲೇಶಪುರ/ಹಾಸನ ತನಕದ ರೈಲ್ವೇ ಜಾಲವನ್ನು ಸೇರಿಸಿ ಮಂಗಳೂರು ಸೆಂಟ್ರಲ್‌ ಅನ್ನು ಕೇಂದ್ರ ಸ್ಥಾನವಾಗಿ ಮಾಡಿ ಪ್ರತ್ಯೇಕ ರೈಲ್ವೇ ವಿಭಾಗದ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿದೆ.

ಸಹಿ ಅಭಿಯಾನಕ್ಕೆ ಬೆಂಬಲಿಸುವವರಿಗೆ ಲಿಂಕ್‌:https://chng.it/BPBQBkfdC9

LEAVE A REPLY

Please enter your comment!
Please enter your name here