ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ಚಟುವಟಿಕೆ – ಲೋಕಸಭೆಯ ಗಮನ ಸೆಳೆದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು(ದೆಹಲಿ): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ಸೇವನೆ ಮತ್ತು ಮಾರಾಟದ ಚಟುವಟಿಗೆಗಳ ಕುರಿತು ಸದನದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ತಿಂಗಳ ಮಾಧ್ಯಮಗಳ ಹೆಡ್‌ಲೈನ್‌ಗಳನ್ನು ಗಮನಿಸಿದರೆ ನಗರದಲ್ಲಿ ಡ್ರಗ್ಸ್‌ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ಮಂಗಳೂರು ನಗರವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ದೇಶದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಾದಕದ್ರವ್ಯಗಳ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳು ಇದೆ ಎಂಬುವುದು ಅಲ್ಲಗಳೆಯಲಾಗದ ವಿಷಯ ಎಂದು ಸಂಸದರು ಉಲ್ಲೇಖಿಸಿದ್ದಾರೆ.

ಕಳೆದ ವರ್ಷ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೂಡ ಸಾಬೀತಾಗಿತ್ತು. ಪೊಲೀಸರಿಂದ ನಿರಂತರ ಕಾರ್ಯಾಚರಣೆ ನಡೆದರೂ ಮಾದಕದ್ರವ್ಯ ಮಾರಾಟ ಮತ್ತು ಸೇವನೆಯಲ್ಲಿ ಇಳಿಕೆ ಕಂಡಿಲ್ಲ. ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳು ಕೂಡ ಇದರ ವ್ಯಸನಕ್ಕೆ ಒಳಗಾಗುತ್ತಿರುವುದು ಭಯಾನಕ ಎಂದು ಸಂಸದರು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.

ಉತ್ತಮ ಆದಾಯವನ್ನು ಹೊಂದಿರುವ ಮನೆತನದಿಂದ ಬಂದಂತಹ ಯುವಕರು ಡ್ರಗ್ ಪೆಡ್ಲರ್‌ಗಳ ಮುಖ್ಯ ಟಾರ್ಗೆಟ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲಿ ವಿದ್ಯಾರ್ಥಿನಿಯರನ್ನು ಕೂಡ ಪೆಡ್ಲರ್‌ಗಳಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. ಮಂಗಳೂರು ನಗರದಲ್ಲಿರುವ ಮಾದಕ ವ್ಯಸನ ನಿರ್ಮೂಲನಾ ಕೇಂದ್ರಗಳಿಗೆ ತಿಂಗಳಿಗೆ ಸರಾಸರಿ 60 ಮಂದಿ ಭೇಟಿ ನೀಡುತ್ತಿರುವುದು ಭಯಾನಕ ವಿಷಯ ಎಂದು ಸಂಸದರು ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಾದಕದ್ರವ್ಯ ಚಟುವಟಿಗಳನ್ನು ಮಟ್ಟ ಹಾಕಬೇಕಾಗಿದೆ. ಇದರಿಂದ ಬರುವಂತಹ ಆದಾಯವು ನೇರವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದು, ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾದಕದ್ರವ್ಯದ ಜಾಲವನ್ನು ಬುಡ ಸಮೇತ ಕಿತ್ತು‌ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸದರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here