ಶಾಸಕರಿಗೆ ತರಬೇತಿ – ಶಿಬಿರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ – ಶಾಸಕ ಅಶೋಕ್‌ ರೈ ಭಾಗಿ

ಮಂಗಳೂರು(ಬೆಂಗಳೂರು): ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಗೊಂಡ 70 ಶಾಸಕರಿಗೆ ಸಂಸದೀಯ ಕಲಾಪದ ಬಗ್ಗೆ ಅರಿವು ಮೂಡಿಸಲು ನೆಲಮಂಗಲದ ಧರ್ಮಸ್ಥಳ ಕ್ಷೇಮವನದಲ್ಲಿ ಜೂ.26ರಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರ ಆರಂಭಗೊಂಡಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗಿಯಾದರು.

ನೆಲಮಂಗಲದ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸಸ್‌ ಕ್ಷೇಮವನದಲ್ಲಿ ಆಯೋಜಿಸಲಾಗಿರುವ ತರಬೇತಿ ಶಿಬಿರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಯಯ್ಯ, ಮಾತನಾಡಿ ಸದನದಲ್ಲಿ ಸದಾ ಹಾಜರಿ, ಪೂರ್ವತಯಾರಿ, ಭಾಷೆ ಮೇಲೆ ಹಿಡಿತ, ಜನಪರ ವಿಷಯದ ಮಂಡನೆ, ವಿಷಯ ತಜ್ಞರ ಜತೆ ಚರ್ಚೆ, ಅಧ್ಯಯನಶೀಲತೆ, ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಕಾಳಜಿ, ಜನರ ಬಗ್ಗೆ ಗೌರವ, ಸಂವಿಧಾನದ 51ನೇ ವಿಧಿವರೆಗಿನ ಅರಿವು, ಸದನದ ನಿಯಮಗಳ ಮಾಹಿತಿ ಮತ್ತು ಸಂವಿಧಾನಕ್ಕೆ ಬದ್ಧತೆ ಮುಂತಾದ ಅಂಶಗಳನ್ನು ರೂಡಿಸಿಕೊಂಡು ಉತ್ತಮ ಸಂಸದೀಯ ಪಟುಗಳಾಗಿ ಬೆಳೆಯಬೇಕು” ಎಂದು ಹೇಳಿದರು.

ಸದನ ನಡೆಸುವ ನಿಯಮಾವಳಿಗಳನ್ನು ಓದಬೇಕು. ಇಲ್ಲವಾದರೆ ಏನು ಪ್ರಶ್ನೆ ಕೇಳಬೇಕು, ಯಾವ ನಿಯಮದಡಿ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ನಾವು ಏನೇ ಕಾನೂನು, ತಿದ್ದುಪಡಿ ಮಾಡಿದರೂ ಅದು ಸಂವಿಧಾನದ ಆಶಯಕ್ಕೆ ಬದ್ಧವಾಗಿರಲೇಬೇಕು. ಆದ್ದರಿಂದ ಸಂವಿಧಾನದ ಅರಿವು ಇರಬೇಕು. ಜನರಿಗೆ ಪೂರಕವಾದ ಕಾನೂನು ರೂಪಿಸುವ ಸಿದ್ಧತೆ ಮತ್ತು ಬದ್ಧತೆ ಹೊಂದಿರಬೇಕು. ಬಜೆಟ್‌ ಅನ್ನು ಅರ್ಥಮಾಡಿಕೊಳ್ಳುವ ಶಕ್ತಿ ರೂಡಿಸಿಕೊಳ್ಳಿ. ಗ್ರಂಥಾಲಯ ಬಳಸಿಕೊಳ್ಳಿ. ಕಲಾಪ ನಡೆಯುವ ದಿನಗಳಲ್ಲಿ ಬೇರೆ ಯಾವುದೇ ಕಾರ್ಯಕ್ರಮ, ಭೇಟಿಗಳನ್ನು ಇಟ್ಟುಕೊಳ್ಳಬೇಡಿ. ಕೋರ್ಟ್‌ ನಿಮ್ಮನ್ನು ಪ್ರಶ್ನೆ ಮಾಡದಿರಬಹುದು. ಆದರೆ ಜನತಾ ಕೋರ್ಟ್‌ ಪ್ರಶ್ನೆ ಮಾಡುತ್ತದೆ ಎಂದರು.

ಜನರ ಧ್ವನಿಯಾಗಿ ಕೆಲಸ ಮಾಡಿದರೆ ಮಾತ್ರ ರಾಜಕಾರಣದಲ್ಲಿ ಉಳಿದು ಮುಂದಿನ ಚುನಾವಣೆಯನ್ನು ಗೆಲ್ಲಲು ಸಾಧ್ಯ. ಜನಪರ ಕಾಳಜಿ ಇಲ್ಲದವರು ಒಂದು ಚುನಾವಣೆ ಮಾತ್ರ ಗೆಲ್ಲಬಹುದು. ಬೆವರಿನ ಶ್ರಮ, ಸಂಸ್ಕೃತಿಗೆ ಅಸಹ್ಯ ಪಡದವರನ್ನು, ಜನರ ಜತೆ ಬೆರೆತು ಗೌರವ ವಿಶ್ವಾಸದಿಂದ ನಡೆದುಕೊಳ್ಳುವವರನ್ನು, ಜನಸೇವೆಗಾಗಿ ರಾಜಕಾರಣ ಮಾಡುವವರನ್ನು ಮತದಾರರು ಕೈ ಬಿಡುವುದಿಲ್ಲ ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ಸಚಿವ ಎಚ್‌. ಕೆ. ಪಾಟೀಲ್‌ ಮಾತನಾಡಿ, ಶಾಸಕರು ಗೌರವಯುತ ಮತ್ತು ಗಂಭೀರ ನಡವಳಿಕೆ ರೂಡಿಸಿಕೊಂಡಾಗ ಜನರು ಮತ್ತು ಅಧಿಕಾರಿಗಳು ಗೌರವಿಸುತ್ತಾರೆ. ಸದನ ಎಂಬುದು ಸಂತೆಯಲ್ಲ ಎಂಬುದನ್ನು ಅರಿತು ಗೌರವಯುತವಾಗಿ ವರ್ತಿಸಿ. ನೀವು ವರ್ಗಾವಣೆ ಕಡತ ಹಿಡಿದುಕೊಂಡು ಕಾರ್ಯದರ್ಶಿ ಹತ್ತಿರ ಹೋದರೆ ನಿಮ್ಮ ಗಂಭೀರತೆ ಕಡಿಮೆ ಆಗುತ್ತದೆ ಎಂದು ಕಿವಿಮಾತು ಹೇಳಿದರು.

ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸೇರಿದಂತೆ ಹಲವರು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

LEAVE A REPLY

Please enter your comment!
Please enter your name here