ಊಟಕ್ಕೆ ವಿಷ ಬೆರೆಸಿ ತಂದೆ-ತಾಯಿಯ ಕೊಲೆಗೈದ ಪಾಪಿ ಪುತ್ರ

ಮಂಗಳೂರು(ಹಾಸನ): ಊಟಕ್ಕೆ ವಿಷ ಬೆರೆಸಿ ತಂದೆ ಹಾಗೂ ತಾಯಿಯನ್ನು ಮಗನೇ ಹತ್ಯೆಗೈದ ಘಟನೆ ಅರಕಲಗೋಡಿನ ಬಿಸಿಲಹಳ್ಳಿಯಲ್ಲಿ ನಡೆದಿದೆ. ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪಾಪಿ ಪುತ್ರ ಈ ಕೃತ್ಯ ಎಸಗಿರುವುದು ತನಿಖೆ ವೇಳೆ ಬಯಲಾಗಿದೆ. ಮಂಜುನಾಥ್ (27) ವಿಷ ಬೆರಸಿ ತಂದೆ ತಾಯಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ವಿಧವೆ ಒಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿಗೆ ತಂದೆ-ತಾಯಿ ಬುದ್ಧಿವಾದ ಹೇಳಿದ್ದರು. ಅಲ್ಲದೇ ಸಹಕಾರ ಸಂಘಗಳಲ್ಲಿ ಆತನ ತಾಯಿ ಉಮಾ (48)ಮಾಡಿದ್ದ ಸಾಲದ ಹಣವನ್ನು ಆರೋಪಿ ದುರುಪಯೋಗ ಪಡಿಸಿಕೊಂಡಿದ್ದ. ಹಣವನ್ನು ವಾಪಸ್ ಕೇಳಿದ್ದಕ್ಕೆ ಪೋಷಕರ ಮೇಲೆ ಸಿಟ್ಟಾಗಿದ್ದ ಮಂಜುನಾಥ್ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ ಹಾಗೂ ತಾಯಿಯನ್ನು ಕೊಲೆಗೈದಿದ್ದಾನೆ.

ತಾಯಿಗಿಂತ ಮೊದಲೇ ಪಲಾವ್ ತಿಂದ ಮಂಜುನಾಥ್ ಬಳಿಕ ಪಲಾವ್‍ಗೆ ಕಳೆನಾಶಕ ಬೆರೆಸಿದ್ದ. ತಂದೆ ತಾಯಿ-ತಿಂಡಿ ತಿಂದ ಬಳಿಕ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಚಿಕಿತ್ಸೆ ಕೊಡಿಸುವ ನೆಪದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಕರೆತಂದಿದ್ದ. ಬಳಿಕ ತಾಯಿ ಉಮಾ ಹಾಗೂ ತಂದೆ ನಂಜುಂಡಪ್ಪ (55) ಹಠಾತ್ ಆಗಿ ಸಾವಿಗೀಡಾಗಿದ್ದರು. ನಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಂಪತಿಯ ಕಿರಿಯ ಪುತ್ರ ಕೊಣನೂರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಪೊಲೀಸರು ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆ ನಡೆಸಿ, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮಂಜುನಾಥ್‍ನನ್ನು ತನಿಖೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ವಿಷ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here