ಶಿವರಾಜ್ ಕುಮಾರ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ `ಘೋಸ್ಟ್’ನಲ್ಲಿ ಪುತ್ತೂರ ಪ್ರತಿಭೆ ವಿಜೇಶ್ (ಆರ್ಯನ್) ಶೆಟ್ಟಿ

ಮಂಗಳೂರು/ಪುತ್ತೂರು: ಸಿನಿರಂಗದಲ್ಲಿ ಹಲವು ಕರಾವಳಿಯ ಪ್ರತಿಭೆಗಳು ಸದ್ದು ಮಾಡಿ ಸುದ್ದಿಯಾಗಿದ್ದಾರೆ. ಇದೀಗ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್  ಮುಖ್ಯ ಭೂಮಿಕೆಯಲ್ಲಿರುವ ʼಘೋಸ್ಟ್’ ಸಿನಿಮಾ ಅ.19ರಂದು ರಿಲೀಸ್ ಆಗುತ್ತಿದೆ. ಶಿವರಾಜ್ ಕುಮಾರ್ ನಟನೆಯ ಪ್ರಪ್ರಥಮ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಹಲವು ಸಿನಿರಂಗಗಳ ಮೇರು ನಟ ನಟಿಯರು ಬಣ್ಣ ಹಚ್ಚಿರುವ ಈ ಸಿನಿಮಾದಲ್ಲಿ ಪುತ್ತೂರು ಮೂಲದ ನಟ ವಿಜೇಶ್ (ಆರ್ಯನ್)ಶೆಟ್ಟಿ ಕೂಡ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಬಹುನಿರೀಕ್ಷಿತ ʼಘೋಸ್ಟ್ʼ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಿಕಟ ಪಾತ್ರವನ್ನು ವಿಜೇಶ್ (ಆರ್ಯನ್) ಶೆಟ್ಟಿ ನಿರ್ವಹಿಸಿದ್ದಾರೆ. ಶಿವಣ್ಣನ ಗ್ಯಾಂಗ್‌ನ ಸದಸ್ಯನ ಪಾತ್ರ ಇದಾಗಿದ್ದು, ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಂದೇಶ್ ನಾಗರಾಜ್ ಸಿನಿಮಾವನ್ನು ಅರ್ಪಿಸಿದ್ದಾರೆ. ಬೀರ್‌ಬಲ್ ಖ್ಯಾತಿಯ ಶ್ರೀನಿ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ನಾಯಕನಾಗಿ ಶಿವರಾಜಕುಮಾರ್ ನಟಿಸಿದ್ದರೆ, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಮತ್ತು ತುಳು ಸಿನಿಮಾ ರಂಗಗಳಲ್ಲಿ ನಟನೆ ಮಾಡಿರುವ ವಿಜೇಶ್ (ಆರ್ಯನ್) ಶೆಟ್ಟಿ ಮೂಲತಃ ಪುತ್ತೂರು ಸಮೀಪದ ಮೊಟ್ಟೆತ್ತಡ್ಕದವರು. ವಿಜೇಶ್ (ಆರ್ಯನ್) ಶೆಟ್ಟಿ ಎಳವೆಯಿಂದಲೇ ನಟನೆಯತ್ತ ಆಸಕ್ತಿ ಹೊಂದಿದ್ದವರು. ನಿವೃತ್ತ ಎಎಸೈ ಕೃಷ್ಣ ಶೆಟ್ಟಿ-ಮಂಜುಳಾ ಶೆಟ್ಟಿ ದಂಪತಿಯ ಪುತ್ರ. ಪುತ್ತೂರಿನ ಮಾಯ್‌ದೆ ದೇವುಸ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ಬಳಿಕ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಪೂರೈಸಿದ್ದರು. ಕಾಲೇಜು ಟೈಮ್‌ನಲ್ಲೇ ಸ್ವಂತ ಜಿಮ್ ನಡೆಸುತ್ತಿದ್ದ ಆರ್ಯನ್ ಅವರು ಸಿನಿಮಾ ಮತ್ತು ಬ್ಯುಸಿನೆಸ್‌ನಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿ ಕಾಲೇಜು ವಿದ್ಯಾಭ್ಯಾಸ ಮುಗಿದ ಕೂಡಲೇ ಸಿನಿರಂಗದಲ್ಲಿ ಮಿಂಚಬೇಕೆನ್ನುವ ಆಸೆಯಿಂದ ಬೆಂಗಳೂರಿಗೆ ಮುಖ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ರಾಜಧಾನಿಯಲ್ಲಿ ನೆಲೆಸಿರುವ ವಿಜೇಶ್ (ಆರ್ಯನ್) ಶೆಟ್ಟು ಈಗ ಅಲ್ಲಿ ಸ್ವಂತ ಟೆಕ್ಸ್ ಟೈಲ್ ಶಾಪ್ ಹೊಂದಿದ್ದಾರೆ.

2014ರಲ್ಲಿ ತೆರೆಕಂಡ ʼನಾನು ಹೇಮಂತ್ ಅವಳು ಸೇವಂತಿ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದ ವಿಜೇಶ್ (ಆರ್ಯನ್) ಶೆಟ್ಟಿಯವರು, 2018ರಲ್ಲಿ ತೆರೆಕಂಡ `ಗೌಡ್ರು ಸೈಕಲ್’ ಎನ್ನುವ ಸಿನಿಮಾದಲ್ಲಿ ಕೂಡ ಹೀರೋ ಆಗಿ ಮಿಂಚಿದ್ದರು. ಇನ್ನು ತುಳು ಸಿನಿಮಾರಂಗದಲ್ಲಿ ಕೂಡ ವಿಜೇಶ್ ಅವರು ಸೈ ಅನಿಸಿಕೊಂಡಿದ್ದು ನಾಯಕ ನಟನಾಗಿ ಮಿಂಚಿರುವ `ಗಂಟ್ ಕಲ್ವೆರ್’ ಎನ್ನುವ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಜೊತೆಗೆ ಎಲೆಕ್ಟ್ರಾನಿಕ್ ಸಿಟಿ ಎನ್ನುವ ಸಿನಿಮಾ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಮೂಲಕ ಕರಾವಳಿಯ ಆರ್ಯನ್ ಶೆಟ್ಟಿ ನಟನಾ ಚಾತುರ್ಯವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಪ್ರೇಕ್ಷಕರಿಗೆ ಲಭಿಸಲಿದೆ.

LEAVE A REPLY

Please enter your comment!
Please enter your name here