ಕೆಂಗೇರಿ: ತೆಂಗಿನಕಾಯಿ ಕೀಳಲು ತೆಂಗಿನ ಮರ ಏರಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಕೊನೆಯುಸಿರೆಳೆದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಲಸಂದ್ರ ನಿವಾಸಿ ನಾರಾಯಣಪ್ಪ (60) ಮೃತಪಟ್ಟವರು. ಮೈಲಸಂದ್ರದ ವಿಜಯಶ್ರೀ ಲೇಔಟ್ನಲ್ಲಿರುವ ವೆಂಕಟರಣ ದೇವಸ್ಥಾನ ಸಮೀಪದ ಸುಮಾರು 50 ಅಡಿ ಎತ್ತರದ ತೆಂಗಿನ ಮರಕ್ಕೆ ಕಾಯಿ ಕೀಳಲು ಮೇಲೆರಿದ್ದಾರೆ. ಈ ವೇಳೆ ಹೃದಯಾಘಾತಕ್ಕೆ ಒಳಗಾದ ನಾರಾಯಣಪ್ಪ ತೆಂಗಿನ ಮರದ ಮೇಲೆಯೇ ಉಸಿರು ಚೆಲ್ಲಿದ್ದಾರೆ. ಬಹಳ ಹೊತ್ತಾದರೂ ಕೆಳಗೆ ಬಾರದ ನಾರಾಯಣಪ್ಪನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಗ್ನಿ ಶಾಮಕ ದಳದ ಸಹಾಯದಿಂದ ಕ್ರೇನ್ ಮೂಲಕ ಅದಾಗಲೇ ನಿಶ್ಚಲರಾದ ನಾರಾಯಣಪ್ಪನನ್ನು ಕೆಳಗಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.