ಭಾರತ ಸರಕಾರದಿಂದ ಒತ್ತಡ, ದಾಳಿ ಬೆದರಿಕೆ-ಟ್ವಿಟರ್‌ ಮಾಜಿ ಸಿಇಒ ಜಾಕ್ ಡೋರ್ಸಿ

ಮಂಗಳೂರು(ಹೊಸದಿಲ್ಲಿ): ರೈತರ ಪ್ರತಿಭಟನೆಗಳು ಹಾಗೂ ಕೇಂದ್ರವನ್ನು ಟೀಕಿಸುವ ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಸರಕಾರ ಟ್ವಿಟರ್‌ಗೆ ಹಲವಾರು ವಿನಂತಿಗಳನ್ನು ಮಾಡಿದೆ. ಆ ನಂತರ ಒತ್ತಡ ಹೇರಲಾಯಿತು ಹಾಗೂ ಟ್ವಿಟರ್ ಉದ್ಯೋಗಿಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಯಿತು ಎಂದು ಟ್ವಿಟರ್‌ ನ ಮಾಜಿ ಸಿಇಒ ಜಾಕ್ ಡೋರ್ಸಿ ಆರೋಪಿಸಿದ್ದಾರೆ. ಜೂನ್ 12 ರಂದು ಡೋರ್ಸಿ, ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ.

ಟ್ವಿಟರ್‌ನ ಸಿಇಒ ಆಗಿದ್ದ ಸಮಯದಲ್ಲಿ ವಿದೇಶಿ ಸರಕಾರಗಳಿಂದ ಎದುರಿಸಿದ ಒತ್ತಡಗಳ ಬಗ್ಗೆ ಡೋರ್ಸಿ ಅವರನ್ನು ಪ್ರಶ್ನಿಸಿದಾಗ, ರೈತರ ಪ್ರತಿಭಟನೆಯ ಕುರಿತು, ಸರಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರಿಗೆ ಸಂಬಂಧಿಸಿ ಭಾರತದಿಂದ ನಮಗೆ ಅನೇಕ ಬೇಡಿಕೆಗಳು ಬಂದಿದ್ದವು. ನಮಗೆ ಬಹಳ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚಲಾಗುತ್ತದೋ ಎಂಬ ಭಾವನೆ ನಮಗೆ ಬಂದಿತ್ತು. ನಾವು ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಬೆದರಿಸಿದ್ದಲ್ಲದೆ ದಾಳಿ ಕೂಡಾ ಮಾಡಿದರು. ನೀವು ನಮ್ಮ ಸೂಚನೆಗಳನ್ನು ಪಾಲಿಸದಿದ್ದರೆ ನಾವು ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ ಎಂದು ಬೆದರಿಸಲಾಗಿತ್ತು. ಇದು ಪ್ರಜಾಪ್ರಭುತ್ವ ದೇಶ ಭಾರತ ಎಂದು ಡೋರ್ಸಿ ಹೇಳಿದ್ದಾರೆ. ಟರ್ಕಿ ಸೇರಿದಂತೆ ಇತರ ದೇಶಗಳಲ್ಲಿ ಆಗಿರುವ ತನ್ನ ಅನುಭವವನ್ನು ಹಂಚಿಕೊಂಡ ಡೋರ್ಸಿ ಭಾರತವನ್ನು ಟರ್ಕಿಗೆ ಹೋಲಿಸಿದ್ದು ಟರ್ಕಿ ಕೂಡ ಭಾರತದಂತೆಯೇ ಇತ್ತು ಎಂದು ಹೇಳಿದ್ದಾರೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಟ್ವಿಟರ್ ನ ಮಾಜಿ ಸಿಇಒ ಹೇಳಿಕೆಯನ್ನು ನಿರಾಕರಿಸಿದ್ದು, ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಡೋರ್ಸಿ ಆರೋಪಿಸಿದಂತೆ ಯಾರ ಮೇಲೂ ದಾಳಿ ಮಾಡಿಲ್ಲ ಅಥವಾ ಯಾರನ್ನೂ ಜೈಲಿಗೆ ಕಳುಹಿಸಲಾಗಿಲ್ಲ. ಯಾರೂ ಜೈಲಿಗೆ ಹೋಗಲಿಲ್ಲ ಅಥವಾ ಟ್ವಿಟರ್ ಸ್ಥಗಿತಗೊಳಿಸಲಿಲ್ಲ. ಡೋರ್ಸಿಯವರ ಆರೋಪಗಳು “ಟ್ವಿಟ್ಟರ್ ಇತಿಹಾಸದ ಅತ್ಯಂತ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನ”ವಾಗಿದೆ ಎಂದು ರಾಜೀವ್‌ ಚಂದ್ರಶೇಖರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here