ಗ್ಯಾರಂಟಿ ಭರವಸೆ ನೀಡುವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ಲವೇ ? ಸಗಣಿ ತುಂಬಿತ್ತೇ ? – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಂಗಳೂರು: ಗ್ಯಾರೆಂಟಿಗಳ ಭರವಸೆ ನೀಡುವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ಲವೇ ? ಸಗಣಿ ತುಂಬಿತ್ತೇ ? ಎಂದು ಕಾಂಗ್ರೆಸ್ ನಾಯಕರನ್ನು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರ ಅಕ್ಕಿ, ದಾಸ್ತಾನು ಇಟ್ಟುಕೊಂಡಿರುವುದು ತುರ್ತು ಸಂದರ್ಭಕ್ಕಾಗಿಯೇ ಹೊರತು ಕರ್ನಾಟಕಕ್ಕೆ ನೀಡಲು ಅಲ್ಲ. ಪ್ರವಾಹ, ಬರ, ಸಾಂಕ್ರಾಮಿಕ ರೋಗಗಳ ರೀತಿಯ ಆಪತ್ತಿನ ಸಂದರ್ಭವನ್ನು ನಿಭಾಯಿಸಲು ಅಕ್ಕಿ, ದಾಸ್ತಾನು ಇಟ್ಟುಕೊಳ್ಳಲಾಗಿದೆ. ಬೇರೆ ರಾಜ್ಯಗಳಿಂದ ಅಥವಾ ರಾಜ್ಯದ ರೈತರು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿರುವ ಅಕ್ಕಿಯನ್ನು ರಾಜ್ಯ ಸರಕಾರ ಖರೀದಿಸಿ ಪಡಿತರದಾರರಿಗೆ ವಿತರಿಸಲಿ ಎಂದು ಅವರು ಹೇಳಿದ್ದಾರೆ.

ಒಂದೇ ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಪ್ರಧಾನಿ ನರೇಂದ್ರ ಮೋದಿ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು ಗ್ಯಾರಂಟಿ ಹೆಸರಿನಲ್ಲಿ ಮತ ಪಡೆದಿರುವ ಸಿದ್ದರಾಮಯ್ಯಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗಲೇ ನಾವು ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನೆ ಮಾಡಿದ್ದೆವು. ಜನರ ಮೂಗಿಗೆ ತುಪ್ಪ ಸವರಿ ಮತ ಪಡೆದು ಈಗ ಮೋಸ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಕೊಡುತ್ತಿರುವ 5 ಕೆಜಿ ಬಿಟ್ಟು ಹೆಚ್ಚುವರಿಯಾಗಿ 10 ಕೆಜಿ ಅಕ್ಕಿ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here