ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದ ಜಯೇಶ್ ಪೂಜಾರಿಗೆ ಉಗ್ರ ಅಫ್ಸರ್‌ ಪಾಷಾ ಜತೆ ಲಿಂಕ್-ಹಿರಿಯ ಪೊಲೀಸ್ ಅಧಿಕಾರಿಯಿಂದ ಸ್ಪೋಟಕ ಮಾಹಿತಿ

ಮಂಗಳೂರು(ನಾಗ್ಪುರ): ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್‌ ಪೂಜಾರಿ ಅಲಿಯಾಸ್ ಕಾಂತ (ಶಾಕೀರ್) ಸದ್ಯ ಭಯೋತ್ಪಾದಕ ಕೇಸಿನಲ್ಲಿ ದೋಷಿಯಾಗಿ ಕರ್ನಾಟಕದ ಜೈಲಿನಲ್ಲಿರುವ ಉಗ್ರ ಅಫ್ಸರ್‌ ಪಾಷಾ ಜತೆ ಸಂಪರ್ಕದಲ್ಲಿದ್ದಾನೆ. ಅಲ್ಲದೇ ಬೆದರಿಕೆ ಕರೆ ಮಾಡಿದಾಗ ಪಾಷಾ ಜತೆಗೇ ಪೂಜಾರಿ ಬೆಳಗಾವಿ ಜೈಲಿನಲ್ಲಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ಇದು ಭಯೋತ್ಪಾಕರ ಕುಮ್ಮಕ್ಕಿನ ಮೇಲೆ ನಡೆದ ಬೆದರಿಕೆಯೇ ಎಂಬ ಕುರಿತು ತನಿಖೆ ಚುರುಕುಗೊಳಿಸಲಾಗಿದೆ. ಹೀಗಾಗಿ ಪಾಷಾನನ್ನು ಬಂಧಿಸಲು ನಾಗ್ಪುರ ಪೊಲೀಸರ ತಂಡವು ಕರ್ನಾಟಕಕ್ಕೆ ರವಾನೆಯಾಗಿದೆ ಎಂದು ನಾಗ್ಪುರದ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಳಗಾವಿ ಜೈಲಿನಲ್ಲಿದ್ದ ಕೈದಿ ಜಯೇಶ್‌ ಪೂಜಾರಿ, ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕಳೆದ ಜನವರಿಯಲ್ಲಿ ಕರೆ ಮಾಡಿ, ತಾನು ದಾವೂದ್‌ ಇಬ್ರಾಂಹಿ ಗ್ಯಾಂಗ್‌ ಸದಸ್ಯ ಹಾಗೂ 100 ಕೋಟಿ ರು. ಕೊಡದಿದ್ದರೆ ಕೊಲೆ ಮಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಆತನನ್ನು ಬೆಳಗಾವಿ ಜೈಲಿಂದ ನಾಗ್ಪುರಕ್ಕೆ ಕರೆತರಲಾಗಿತ್ತು. ಪ್ರಕರಣದ ತನಿಖೆ ವೇಳೆ ಜಮ್ಮು- ಕಾಶ್ಮೀರದಲ್ಲಿ ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ಅವರಿಗೆ ಸಹಾಯ ಮಾಡಿದ್ದ ಕೇಸಲ್ಲಿ ಅಪರಾಧಿಯಾಗಿ ಬಂಧಿತನಾಗಿರುವ ಪಾಷಾ ಜತೆ ಪೂಜಾರಿ ಸಂಪರ್ಕದಲ್ಲಿದ್ದಾನೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ. 2005ರಲ್ಲಿ ಬೆಂಗಳೂರಿನ ‘ಭಾರತೀಯ ವಿಜ್ಞಾನ ಸಂಸ್ಥೆ’ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲೂ ಪಾಷಾ ಭಾಗಿಯಾಗಿದ್ದ.

ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹಾರಾಷ್ಟ್ರದ ನಾಗ್ಪುರ ಎಟಿಎಸ್‌ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಪುತ್ತೂರು, ಶಿರಾಡಿ ಮೂಲದ ಜಯೇಶ ಪೂಜಾರಿ ಎಂಬ ಕೈದಿ, ಜೈಲಿನಲ್ಲಿಯೇ ಇದ್ದುಕೊಂಡು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಜ.14ರಂದು ಕರೆ ಮಾಡಿ 100 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನು.

ಒಂದು ವೇಳೆ ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಈ ಕುರಿತು ಮಹಾರಾಷ್ಟ್ರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದರಿಂದ ಈ ಕರೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬಂದಿರುವುದು ಎಂದು ಖಚಿತಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ಆದರೆ ಈ ಘಟನೆ ಮಾಸುವ ಮುನ್ನವೇ ಮಾ.21ರಂದು ಎರಡನೇ ಬಾರಿಗೆ ಜಯೇಶ್‌ ಕಾಂತಾ ಅಲಿಯಾಸ್‌ ಜಯೇಶ್‌ ಪೂಜಾರಿ ಎಂಬಾತನ ಹೆಸರಿನಲ್ಲಿ ಮಹಾರಾಷ್ಟ್ರದ ನಾಗ್ಪುರದ ನಿತಿನ್‌ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ .10 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿರುವ ಗಡ್ಕರಿ ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಿದ್ದ ಪೊಲೀಸರು ಜೀವ ಬೆದರಿಕೆ ಕರೆ ಎಲ್ಲಿಂದ ಬಂದಿತ್ತು ಎಂಬ ಬಗ್ಗೆ ಮಹಾರಾಷ್ಟ್ರ ಎಟಿಎಸ್‌ ಪೊಲೀಸರು ತನಿಖೆ ಕೈಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಮಾ.28ರಂದು ಬಂಧಿತ ಜಯೇಶ ಪೂಜಾರಿಯನ್ನು ನಾಗ್ಪುರ ಪೊಲೀಸರು ವಶಕ್ಕೆ ಪಡೆದು ತಮ್ಮೊಂದಿಗೆ ಕರದೊಯ್ದಿದ್ದರು. ಇದೀಗ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಜಯೇಶ್‌ ಪೂಜಾರಿ ಇರುವ ಹಿಂಡಲಗಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಹಾಗೂ ಆತನೊಂದಿಗೆ ಸಂಪರ್ಕದಲ್ಲಿರುವ ಬೇರೆ ಕೈದಿಗಳಿಂದ ಆತನ ಕುರಿತು ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಮತ್ತೆ ಮಹಾರಾಷ್ಟ್ರದ ನಾಗ್ಪರಕ್ಕೆ ಮರಳಿದ್ದಾರೆ.

ಜಯೇಶ್‌ ಪೂಜಾರಿ ಈ ಹಿಂದೆ 2008ರಲ್ಲಿ ಶಿರಾಡಿಯಲ್ಲಿ ತನ್ನ ದೊಡ್ಡಪ್ಪನ ಮಗ ಲೋಹಿತ್‌ ಎಂಬವರ ಪತ್ನಿ ಸೌಮ್ಯ ಮತ್ತು ಆಕೆಯ 3 ವರ್ಷ ಪ್ರಾಯದ ಮಗು ಜಿಷ್ಣು ವನ್ನು ಕೊಲೆಗೈದು ಪರಾರಿಯಾಗಿದ್ದ. ತಾನು ಮುಸ್ಲಿಂ ಎಂದು ಹೇಳಿ ಮುಸ್ಲಿಂ ಸಮುದಾಯದ ಹುಡುಗಿಯನ್ನು ಮದುವೆಯಾಗಿ ಕೇರಳದಲ್ಲಿ ನೆಲೆಸಿದ್ದ ಈತ ಪತ್ನಿಯೊಂದಿಗೆ ಮುನಿಸಿಕೊಂಡು ತೆಂಗಿನ ಮರವೇರಿ ಕುಳಿತಿದ್ದ. ಪೊಲೀಸರು ಬಂದು ಕೆಳಗಿಳಿಸಿ ವಿಚಾರಣೆ ನಡೆಸಿದಾಗ ಶಿರಾಡಿಯ ಸಿರಿಬಾಗಿಲು ಪೊಲ್ಯೊಟ್ಟು ನಲ್ಲಿ ಹತ್ಯೆ ನಡೆಸಿ, ಕೇರಳಕ್ಕೆ ಬಂದು ಶಾಕಿರ್‌ ಎಂದು ಹೆಸರು ಬದಲಾಯಿಸಿ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿರುವ ಬಗ್ಗೆ ಬಾಯ್ಬಿಟ್ಟು ಬಂಧನಕ್ಕೆ ಒಳಗಾಗಿದ್ದ. 2016ರ ಆಗಸ್ಟ್‌ 12ರಂದು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ಈತನಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

LEAVE A REPLY

Please enter your comment!
Please enter your name here