ಸಮುದ್ರ ವಿಹಾರ – ರುದ್ರಪಾದೆಯಿಂದ ಜಾರಿ ಬಿದ್ದು ವೈದ್ಯರ ಸಾವು – ಮೃತದೇಹ ಪತ್ತೆ

ಮಂಗಳೂರು: ಗೆಳೆಯರೊಂದಿಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ತೆರಳಿದ್ದ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರು ರುದ್ರಪಾದೆಯಿಂದ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ಸಂಭವಿಸಿದ್ದು, ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಮೃತ ವೈದ್ಯರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯ ಸರ್ಜನ್, ರಾಮನಗರ ನಿವಾಸಿ ಡಾ.ಆಶೀಕ್ ಗೌಡ (30) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯರಾತ್ರಿ ಮೃತ ಆಶಿಕ್ ಗೌಡ ತನ್ನ ವೈದ್ಯ ಮಿತ್ರ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಶ್ ಮತ್ತು ಇಂಟನ್‌ಶಿಪ್ ನಡೆಸುತ್ತಿರುವ ಮೂವರು ವೈದ್ಯೆಯರೊಂದಿಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದರು.

ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ.ಪ್ರದೀಶ್ ಸಮುದ್ರಕ್ಕೆ ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ನಿಂತು ರಕ್ಷಣೆಗೆ ಕೂಗುತ್ತಿದ್ದ ಸಂದರ್ಭ ಡಾ.ಆಶೀಕ್ ಗೌಡ ಇಣುಕುವ ಕ್ಷಣದಲ್ಲಿ ಕಾಲುಜಾರಿ ಬಿದ್ದು ಸಮುದ್ರ ಪಾಲಾಗಿದ್ದಾರೆ. ಡಾ.ಪ್ರದೀಶ್ ಸಣ್ಣ ಕಲ್ಲು ಹಿಡಿದು ಈಜಿ ಬಚಾವಾಗಿದ್ದಾರೆ.

ತಡರಾತ್ರಿವರೆಗೂ ಅಗ್ನಿಶಾಮಕ ದಳ, ಉಳ್ಳಾಲ ಪೊಲೀಸ್‌ ಠಾಣೆಯವರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇಂದು ಬೆಳಗ್ಗೆ ರುದ್ರಪಾದೆ ಸಮೀಪ ಸಮುದ್ರ ತೀರದಲ್ಲಿ ಡಾ.ಆಶೀಶ್ ಮೃತದೇಹ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here