ಬೆಟ್ಟಿಂಗ್‌ ಗೀಳು – ಮೈತುಂಬಾ ಸಾಲ – ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಉಳ್ಳಾಲ ತಾಲೂಕಿನ ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ(35) ಎಂಬವರು ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದ್ದು, ಸಾಲದ ಹೊರೆಯಲ್ಲಿದ್ದ ವ್ಯಕ್ತಿಯ ಸಾವಿಗೆ ಬೆಟ್ಟಿಂಗ್ ಜಾಲವೇ ಕಾರಣವೆಂದು ಹೇಳಲಾಗುತ್ತಿದೆ.

ರವೀಂದ್ರ ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ಸೆ.10 ರಂದು ತೆರಳಿದ್ದು ಮಧ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನ ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಒಬ್ಬಂಟಿಯಾಗಿ ಪತ್ನಿಯ ಮನೆ ಸೇರಿದ್ದರಂತೆ. ಸಾಯಂಕಾಲ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ವಿಚಲಿತರಾದ ಪತ್ನಿ ನೆರೆ ಹೊರೆಯವರಲ್ಲಿ ಕರೆ ಮಾಡಿ ತಿಳಿಸಿದ್ದಾರೆ. ನೆರೆ ಮನೆಯವರು ಮನೆ ಕಡೆ ತೆರಳಿದಾಗ ರವೀಂದ್ರ ಅವರು ಮನೆಯ ಚಾವಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮ ಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ. ರವೀಂದ್ರ ಅವರು ಕ್ರಿಕೆಟ್ ಬೆಟ್ಟಿಂಗಲ್ಲಿ ಸಕ್ರಿಯರಾಗಿದ್ದು ಮೈತುಂಬಾ ಸಾಲ ಮಾಡಿಕೊಂಡಿದ್ದರು ಎಂದು ಅವರನ್ನ ಬಲ್ಲ ಆಪ್ತರು ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here