ಲಂಚ ಕೇಳಿದ ಮಹಿಳಾ ಕೃಷಿ ಅಧಿಕಾರಿ – ಒಂದು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ

ಮಂಗಳೂರು: ಬಿಲ್ ಪಾವತಿಗೆ ಬಿಲ್ ಮೊತ್ತದ 15 ಪರ್ಸೆಂಟ್ ಕಮಿಷನ್ ಲಂಚ ಕೇಳಿದ ಮಹಿಳಾ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಂಗಳೂರು ವಿಭಾಗದ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ. 2022-23ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ “ಪ್ರಧಾನ ಮಂತ್ರಿ ಕೃಷಿ ಸಿಂಚಯಿ” ಯೋಜನೆಯಡಿ ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸರಕಾರದ ವತಿಯಿಂದ ಉಚಿತವಾಗಿ ವಿವಿಧ ಜಾತಿ ಅರಣ್ಯ ಮತ್ತು ತೋಟಗಾರಿಕಾ ಗಿಡಗಳನ್ನು ವಿತರಿಸಲಾಗಿತ್ತು. ಇದನ್ನು ಕೆಲವು ನರ್ಸರಿಗಳ ಮೂಲಕ ಪಡೆದು, ಅರಣ್ಯ ಇಲಾಖೆ ಗುತ್ತಿಗೆದಾರರಿಂದ ಗಿಡಗಳನ್ನು ನಾಟಿ ಮಾಡಿಸಿತ್ತು.

ಈ ಕಾಮಗಾರಿಗೆ 50 ಲಕ್ಷದಷ್ಟು ಹಣ ಸರಕಾರದಿಂದ ಬರಬೇಕಾಗಿತ್ತು. ಈ ಹಿನ್ನಲೆ ಕೃಷಿ ಇಲಾಖೆಯಲ್ಲಿ ಅಂದು ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾಗಿರುವ ಪರಮೇಶ್ ಎನ್.ಪಿ ಅವರು ಬಿಲ್ ಬಾಕಿ ಪಾವತಿಗೆ ಮಂಗಳೂರು ವಿಭಾಗದ ಉಪಕೃಷಿ ನಿರ್ದೇಶಕಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದಾರೆ. ಈ ವೇಳೆ ಅಧಿಕಾರಿ ಭಾರತಮ್ಮ ಅವರು ಬಿಲ್ ಪಾವತಿಸಬೇಕಾದರೆ ಬಿಲ್ ಮೊತ್ತದ 15 % ಹಣವನ್ನು ಮುಂಗಡವಾಗಿ ನನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೇ ನಾನು ಬಿಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಪರಮೇಶ್ ಅವರು ಅ.20 ರಂದು ಮತ್ತೆ ಅಧಿಕಾರಿ ಭಾರತಮ್ಮ ಅವರಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಬಿಲ್ ಪಾವತಿಗೆ 1 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಮೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳೂರು ಉಪ ಕೃಷಿ ನಿರ್ದೇಶಕಿ ಭಾರತಮ್ಮ ಅವರು ಪರಮೇಶ್ ಅವರಿಂದ 1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

LEAVE A REPLY

Please enter your comment!
Please enter your name here