ನೇಜಾರು ನಾಲ್ಕು ಹತ್ಯೆ ಪ್ರಕರಣ-ಕೃತ್ಯದ ಆರೋಪಿ ಪ್ರವೀಣ್‌ನ ಚಾಣಾಕ್ಷ ನಡೆ-ಸಾಕ್ಷಿ, ಸುಳಿವು ಸಿಗದಂತೆ ಮಾಸ್ಟರ್ ಪ್ಲ್ಯಾನ್-ಮೊಬೈಲ್‌ನಿಂದ ಸಿಕ್ಕಿಬಿದ್ದ ಹಂತಕ

ಮಂಗಳೂರು(ಉಡುಪಿ): ನೇಜಾರು ತೃಪ್ತಿ ಲೇಔಟ್‌ ನಲ್ಲಿ ನಾಲ್ವರನ್ನು ಭೀಕರವಾಗಿ ಕೊಲೆಗೈದ ಆರೋಪಿ ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ(39) ಯೋಜಿತವಾಗಿ ಚಾಣಾಕ್ಷತಣದಿಂದ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಯಾವುದೇ ಸಾಕ್ಷ್ಯಾಧಾರ ಮತ್ತು ತನ್ನ ಮುಖ ಪರಿಚಯ ಸಿಗಬಾರದೆಂಬ ಉದ್ದೇಶದಿಂದ ಪ್ರವೀಣ್ ಚೌಗುಲೆ ಈ ಪೂರ್ವ ಯೋಜಿತ ಕೊಲೆಗಾಗಿ ತನ್ನ ಕಾರು, ಮಾಸ್ಕ್, ಹಲವು ರಿಕ್ಷಾ, ಬೈಕ್, ಬಸ್‌ಗಳನ್ನು ಬಳಸಿದ್ದಲ್ಲದೇ ತನ್ನ ಜತೆಯಲ್ಲಿ ಬ್ಯಾಗ್ ನಲ್ಲಿ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟು ಕೊಂಡಿದ್ದನು. ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕೆಲವು ಸಮಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದ ಈತ, ತನ್ನ ಕ್ರಿಮಿನಲ್ ಬುದ್ಧಿ ಬಳಸಿ ಎಲ್ಲಾ ಸಿದ್ಧತೆ ಹಾಗೂ ಯೋಜನೆಯೊಂದಿಗೆ ಈ ಕೃತ್ಯ ಎಸಗಲು ಮುಂದಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನ.12ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಆರೋಪಿ ಪ್ರವೀಣ್ ಚೌಗುಲೆ, ಮಂಗಳೂರಿನ ಮನೆಯಿಂದ ಕಾರಿನಲ್ಲಿ ಹೊರಟಿದ್ದಾನೆ. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ಸಿಗುವ ಏಕೈಕ ಟೋಲ್‌ಗೇಟ್‌ನಲ್ಲಿ ತನ್ನ ಕಾರು ಹಾದು ಹೋದರೆ ಸಿಸಿಟಿವಿ ಮೂಲಕ ತನ್ನ ಹೆಜ್ಜೆಗುರುತು ಪೊಲೀಸರಿಗೆ ದೊರೆಯುತ್ತದೆ ಎಂಬ ಕಾರಣಕ್ಕೆ ತಾನು ಉಡುಪಿಗೆ ಬಂದಿರುವ ಯಾವುದೇ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಕಾರನ್ನು ಹೆಜಮಾಡಿ ಟೋಲ್‌ಗೇಟ್‌ಗಿಂತ ಮೊದಲೇ ದೂರದಲ್ಲಿ ಪಾರ್ಕ್ ಮಾಡಿ ಅಲ್ಲಿಂದ ಬೈಕ್, ಬಸ್ ಹಿಡಿದು ಉಡುಪಿಗೆ ಆಗಮಿಸಿದ್ದಾನೆ. ಸಂತೆಕಟ್ಟೆಯಿಂದ ಆಟೊ ರಿಕ್ಷಾದಲ್ಲಿ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಐನಾಝ್ ಮನೆಗೆ ನುಗ್ಗಿ ನಾಲ್ವರನ್ನು 15 ನಿಮಿಷದಲ್ಲಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತೃಪ್ತಿ ಲೇಔಟ್‌ನಿಂದ ಹಿಂದಿರುಗಿ ಬರುವ ವೇಳೆ ಆತ ದಾರಿ ಹೋಕರ ಬೈಕ್, ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್‌ವರೆಗೆ ಬಾಡಿಗೆ ರಿಕ್ಷಾ ಬಳಸಿದ್ದ. ಕರಾವಳಿ ಬೈಪಾಸ್‌ನಿಂದ ಬೈಕ್ ಏರಿ ಕಿನ್ನಿಮೂಲ್ಕಿಗೆ ಬಂದ ಪ್ರವೀಣ್, ಸ್ವಲ್ಪ ದೂರದವರೆಗೆ ನಡೆದು ಬಳಿಕ ಬಸ್ ಹತ್ತಿದ್ದನು. ಬಸ್ಸಿನಿಂದ ಇಳಿದು ಹೆಜಮಾಡಿ ಟೋಲ್ ಗೇಟ್ ಸಮೀಪ ನಿಲ್ಲಿಸಿದ ತನ್ನ ಕಾರಿನ ಬಳಿ ಬಂದು ಅಲ್ಲಿಂದ ನೇರವಾಗಿ ತನ್ನ ಮನೆಗೆ ಹೋಗಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಕೃತ್ಯ ಎಸಗಿ ಮನೆಗೆ ಹೋದ ಆರೋಪಿ ಪ್ರವೀಣ್, ಮನೆಯಲ್ಲಿ ರಕ್ತದ ಕಲೆಗಳನ್ನು ಶುಚಿಗೊಳಿಸಿ, ಸುಮಾರು 10 ನಿಮಿಷಗಳ ಕಾಲ ಮನೆಯಲ್ಲಿದ್ದು, ಕೃತ್ಯ ಎಸಗುವ ವೇಳೆ ಗಾಯಗೊಂಡ ಕೈ ಬೆರಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೂ ಹೋಗಿದ್ದ ಎನ್ನಲಾಗಿದೆ. ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆದು ಮನೆಗೆ ಮರಳಿದ ಕಿರಾತಕ ತನ್ನ ಪತ್ನಿ ಮತ್ತು ಮಕ್ಕಳನ್ನು ಕಾರಿನಲ್ಲಿ ಹೊರಗೆ ವಿಹಾರಕ್ಕೆ ಕರೆದೊಯ್ದಿದ್ದು ಸಂಜೆ 6ರ ಸುಮಾರಿಗೆ ಮತ್ತೆ ಮನೆಗೆ ಬಂದಿರುತ್ತಾನೆ. ನಾಲ್ಕು ಮಂದಿಯನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಯಾವುದೇ ರೀತಿಯ ಪಶ್ಚಾತಾಪ ಇಲ್ಲದೆ ಎಂದಿನಂತೆ ಮನೆಯವರೊಂದಿಗೆ ಬೆರೆತುಕೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ಹತ್ಯೆಗೈದ ಮರುದಿನ ನ.13ರಂದು ಬೆಳಗಾವಿಯ ಕುಡುಚಿಗೆ ಕುಟುಂಬದೊಂದಿಗೆ ಪ್ರಯಾಣಿಸಲು ಯೋಜನೆ ಹಾಕಿಕೊಂಡಿದ್ದ ಚೌಗುಲೆ ಅದರಂತೆ ಮರುದಿನ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯೊಂದಿಗೆ ಕುಡುಚಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿ ತನ್ನ ಸಂಬಂಧಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ದೀಪಾವಳಿಯನ್ನು ಆಚರಿಸಿದ್ದ. ಇದೇ ವೇಳೆ ಇತ್ತ ಕಡೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಹತ್ಯೆಗೈದಿರುವುದು ಚೌಗುಲೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೇ ಸಮಯಕ್ಕೆ ಆರೋಪಿ ಚೌಗುಲೆ ತನ್ನ ಮೊಬೈಲ್ ಸ್ವಿಚ್ ಆನ್ ಮಾಡಿಕೊಂಡಿದ್ದು, ಆತನ ಜಾಡು ಹಿಡಿದ ಪೊಲೀಸರು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದರು.

ಆರೋಪಿ ಕೊಲೆಗೆ ಬಳಸಿದ ಚೂರಿಯು ಇಡೀ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದು, ಇದಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊಲೆ ಮಾಡಿದ ಬಳಿಕ ಚೂರಿಯನ್ನು ತನ್ನ ಬ್ಯಾಗ್ ಒಳಗೆ ಹಾಕಿಕೊಂಡ ಆರೋಪಿ, ಅದನ್ನು ಹೆಜಮಾಡಿಯಿಂದ ಮುಂದೆ ಕಾರಿನಲ್ಲಿ ಹೋಗುವಾಗ ಸೇತುವೆಯಿಂದ ಕೆಳಗೆ ಎಸೆದಿರುವುದಾಗಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದ. ಆದರೆ, ನಂತರ ಅದನ್ನು ಮನೆ ಸಮೀಪವೇ ವಿಲೇವಾರಿ ಮಾಡಿರುವುದಾಗಿ ಮಾತು ಬದಲಾಯಿಸಿದ್ದ. ಹೀಗಾಗಿ ಪೊಲೀಸರು ಈ ಆಯುಧಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆಶ್ಚರ್ಯಕರ ಸಂಗತಿ ಅಂದರೆ ನಾಲ್ಕು ಮಂದಿಯನ್ನು ಭೀಕರವಾಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಪ್ರವೀಣ್, ತನ್ನ ರಕ್ತ ಸಿಕ್ಕ ಬಟ್ಟೆಯನ್ನು ಬದಲಾಯಿಸಿಯೇ ಇಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ನಾಲ್ವರ ಹತ್ಯೆಯಿಂದ ಇಡೀ ಮನೆ ರಕ್ತಸಿಕ್ತವಾಗಿತ್ತು. ನಾಲ್ವರು ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೂ ಆತನ ಬಟ್ಟೆಗೆ ಅಲ್ಪಸ್ವಲ್ಪ ಮಾತ್ರವೇ ರಕ್ತದ ಕಲೆಗಳು ಅಂಟಿವೆ. ಇದನ್ನು ಆತ ಬೈಕು, ರಿಕ್ಷಾ, ಬಸ್‌ನಲ್ಲಿ ಪ್ರಯಾಣಿಸುವ ವೇಳೆ ತನ್ನ ಕೈಯಲ್ಲಿದ್ದ ಬ್ಯಾಗ್‌ನಿಂದ ಅವುಚಿಟ್ಟು ಯಾರಿಗೂ ಕಾಣದಂತೆ ಮರೆ ಮಾಚಿದ್ದು, ಹೆಜಮಾಡಿಯಿಂದ ಮಂಗಳೂರು ಹೋಗುವಾಗ ದಾರಿ ಮಧ್ಯೆ ಕಾರು ನಿಲ್ಲಿಸಿ ಕಾರಿನೊಳಗೆಯೇ ತನ್ನ ಬ್ಯಾಗ್‌ನಲ್ಲಿದ್ದ ಬಟ್ಟೆ ತೆಗೆದು ಬದಲಾಯಿಸಿದ್ದಾನೆ ಎಂಬ ವಿಷಯ ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ಕೊಲೆ ನಡೆದ ದಿನ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್‌ಗೆ ಆರೋಪಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದ ಚಾಲಕ, ಮತ್ತೆ ಆತನನ್ನು ಸಂತೆಕಟ್ಟೆಯಲ್ಲಿ ಕಂಡಾಗ ಬಟ್ಟೆಯಿಂದ ಗುರುತಿಸಿದ್ದೆ ಎಂದು ಹೇಳಿಕೆ ನೀಡಿದ್ದರು. ಬಂಧಿತ ಕೊಲೆ ಆರೋಪಿ ಪ್ರವೀಣ್ ಚೌಗುಲೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಆತನಿಂದ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನೇಜಾರು ಮನೆ ಮತ್ತು ಮಂಗಳೂರಿನಲ್ಲಿ ಹಲವೆಡೆ ಆತನನ್ನು ಕರೆದೊಯ್ದು ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆತನನ್ನು ಬೆಳಗಾವಿ, ಮಹಾರಾಷ್ಟ್ರಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆರೋಪಿ ಪ್ರವೀಣ್ ಚೌಗುಲೆ ಕಿರುಕುಳದಿಂದ ಐನಾಝ್, ಆತನ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿದ್ದಳು. ತಂದೆ ಕೆಲಸಕ್ಕೆ ಹೋಗಬೇಡ ಎನ್ನುತ್ತಾರೆಂಬ ಭಯದಿಂದ ಆತನ ಕಿರುಕುಳದ ಬಗ್ಗೆ ಮನೆಯಲ್ಲೂ ಆಕೆ ಹೇಳಿರಲಿಲ್ಲ ಎಂದು ಮೃತ ಐನಾಝ್ ಸಹೋದರ ಅಸಾದ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here