ಎತ್ತಿನ ಹೊಳೆ ಯೋಜನೆಯ ಪ್ರಾಯೋಗಿಕ ಪರೀಕ್ಷೆ – 6 ಕಿ.ಮೀ ದೂರದ ವರೆಗೆ ಪೈಪ್‌ ನಲ್ಲಿ ಹರಿದ ನೀರು – ಭಾರೀ ಪ್ರಮಾಣದ ನೀರು ಸೋರಿಕೆ

ಮಂಗಳೂರು (ಸಕಲೇಶಪುರ): ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಾಯೋಗಿಕ ಹಂತದ ಪೈಪ್ ಲೈನ್ ಬಿರುಕು ಬಿಟ್ಟು ನೀರು ಸೋರಿಕೆ ಪರಿಣಾಮ ನಡಹಳ್ಳಿ ಗ್ರಾಮದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.

ಪ್ರಾಯೋಗಿಕವಾಗಿ ನೀರುಹರಿಸಲಾಗುತ್ತಿರುವ ಕಬ್ಬಿಣದ ಪೈಪ್ ಸೋರಿಕೆ ಪರಿಣಾಮ ಭೂಮಿಯ ಒಳಗಿನಿಂದ ನೀರು ಮೇಲಕ್ಕೆ ಚಿಮ್ಮುತ್ತಿದೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಕೋಲಾರ ಜಿಲ್ಲೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಲಾಗುತ್ತದೆ.

ಕಳೆದ ಎರಡು ದಿನಗಳ ಹಿಂದೆ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಗದ್ದೆ, ದೇಖಲ, ಕುಂಬರಡಿ ಸೇರಿದಂತೆ ಹಲವೆಡೆ ಪೈಪ್‌ಗಳಿಂದ ಭಾರೀ ಪ್ರಮಾಣದ ನೀರು ಸೋರಿಕೆಯಾಗಿದೆ. ಕಾಡುಮನೆಯಿಂದ ದೊಡ್ಡನಾಗರ ನೀರು ಶೇಖರಣಾ ಕೇಂದ್ರದವರೆಗೆ, ಮುಖ್ಯ ರಸ್ತೆಯ ಬದಿಯಲ್ಲಿಯೇ 6 ಕಿ.ಮೀ. ಉದ್ದ ಪೈಪ್‌ಲೈನ್ ಮೂಲಕ ಕಾಡಮನೆ ಚೆಕ್‌ಡ್ಯಾಂ 5 ರ ಒಂದು ಪಂಪ್‌ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಆದರೆ ಲೀಕೇಜ್ ಕಂಡುಬಂದ ಕಾರಣ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ಈ ಭಾಗಗಳ ಮೂಲಕ ಗ್ರಾಮಗಳಿಗೆ ತೆರಳುವ ವಾಹನ ಸಂಚಾರಕ್ಕೆ ಇದರಿಂದ ಬಹಳ ಕಷ್ಟವಾಗುತ್ತಿದೆ. ಇದರಿಂದ ಬೇಸತ್ತು ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here