ತಂಗಿಯ ಮಕ್ಕಳ ಕಿಡ್ನಾಪ್ – ಗಂಡು ಮಗು ಹತ್ಯೆ ಮಾಡಿ ಹೂತು ಹಾಕಿದ ದೊಡ್ಡಮ್ಮ-ಅಟೋ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಕರಣ ಬಯಲಿಗೆ

ಮಂಗಳೂರು(ಗುಡಿಬಂಡೆ): ಮಹಿಳೆಯೊಬ್ಬಳು ಸ್ವಂತ ತಂಗಿಯ ಮಕ್ಕಳನ್ನೇ ಕಿಡ್ನಾಪ್ ಮಾಡಿ, ಗಂಡು ಮಗುವನ್ನು ಹತ್ಯೆಗೈದ ಘಟನೆ ಗುಡಿಬಂಡೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಡಿಬಂಡೆ ಪೊಲೀಸ್ ವೃತ್ತದ ಪೆರೇಸಂದ್ರ ಪೊಲೀಸ್ ಠಾಣೆಯ ವ್ಯಾಪ್ತಿಯ ಮುತ್ತಕದಹಳ್ಳಿ ಗ್ರಾಮದ ನಿವಾಸಿ ಅಂಬಿಕಾ ಎಂಬಾಕೆ ತನ್ನ ತಂಗಿಯ ಮಗನಾದ ಮಧುಕುಮಾರ್ (6) ಎಂಬಾತನನ್ನು ಕೊಲೆ ಮಾಡಿ, ಮಾವಿನ ತೋಟದಲ್ಲಿ ಹೂತು ಹಾಕಿ, ಮಗಳಾದ ಮನುಶ್ರೀಯನ್ನು ಕಿಡ್ನಾಪ್ ಮಾಡಿದ್ದಾಳೆ. ನ.30ರಂದು ಅಂಬಿಕಾ ತನ್ನ ತಂಗಿ ಅನಿತಾಳ ಇಬ್ಬರು ಮಕ್ಕಳನ್ನು ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಹೋಗುವುದಾಗಿ ಕರೆದುಕೊಂಡು ಹೋಗಿ, ಗ್ರಾಮದ ಪಕ್ಕದ ಮಾವಿನ ತೋಟದಲ್ಲಿ ಬಾಲಕ ಮಧುಕುಮಾರ್ ನನ್ನು ಕೊಲೆ ಮಾಡಿ ಹೂತು ಹಾಕಿದ್ದು, ಹೆಣ್ಣು ಮಗಳಾದ ಮನುಶ್ರೀಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾಳೆ. ಹೆಣ್ಣು ಮಗಳನ್ನು ಬೆಂಗಳೂರಿನ ಆಟೋದಲ್ಲಿ ಕರೆದುಕೊಂಡು ಹೋಗುವ ವೇಳೆ ಆಕೆಯ ನಡುವಳಿಕೆ ಹಾಗೂ ಸಂಭಾಷಣೆಯ ಮೇಲೆ ಅಟೋ ಚಾಲಕನಿಗೆ ಅನುಮಾನ ಬಂದಿದ್ದು, ಅಟೋವನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕೆರೆದುಕೊಂಡು ಹೋಗಿದ್ದಾನೆ. ಪೊಲೀಸ್ ಸಿಬಂದಿಯವರು ಆಕೆಯನ್ನು ವಿಚಾರಣೆ ಮಾಡಿದಾಗ ನಡೆದ ವಿಚಾರವನ್ನು ಅಂಬಿಕಾ ಬಾಯಿ ಬಿಟ್ಟಿದ್ದಾಳೆ. ತಂಗಿಯ ಮೇಲಿನ ಕೋಪಕ್ಕೆ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು, ಸ್ಥಳಕ್ಕೆ ಎಸ್.ಪಿ ನಾಗೇಶ್, ಡಿವೈಎಸ್.ಪಿ ಶಿವಕುಮಾರ್, ವೃತ್ತ ನಿರೀಕ್ಷಕ ನಯಾಜ್ ಬೇಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

LEAVE A REPLY

Please enter your comment!
Please enter your name here