ಮಂಗಳೂರು(ಹೊಸದಿಲ್ಲಿ): ಜನವರಿ 22ರಂದು ರಾಮ ಮಂದಿರ ಗರ್ಭಗುಡಿಯಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ದೊಡ್ಡ ಪ್ರಮಾಣದ ಜನಸಂದಣಿ ಸೇರುವ ನಿರೀಕ್ಷೆ ಇದ್ದು ಅಯೋಧ್ಯೆಯ ರಾಮ ಮಂದಿರದ ಬಳಿ ಜನದಟ್ಟಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಲವು ವರ್ಷಗಳ ಕನಸು ನನಸಾಗುತ್ತಿರುವುದರಿಂದ ದೇಶದಾದ್ಯಂತ ಇರುವ ಜನರು ಮುಂದಿನ ತಿಂಗಳು ಅಯೋಧ್ಯೆಗೆ ಭೇಟಿ ನೀಡುವ ಯೋಜನೆ ರೂಪಿಸಿಕೊಂಡಿದ್ದು ಇದನ್ನು ತಡೆಯಲು ಜನರು ಆ ದಿನದಂದು ತಮ್ಮ ತಮ್ಮ ಊರಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ರಾಮ ಮಂದಿರ ದತ್ತಿ ಕಾರ್ಯದರ್ಶಿ ಚಂಪತ್ ರಾಯ್ ಮನವಿ ಮಾಡಿದ್ದಾರೆ. ದಯವಿಟ್ಟು ಅಯೋಧ್ಯೆಗೆ ಬರಬೇಡಿ. ನಿಮ್ಮ ನಿಮ್ಮ ಮನೆಯ ಹತ್ತಿರದ ದೇವಸ್ಥಾನಗಳಿಗೆ ಹೋಗಿರಿ ಎಂದು ಜನರಿಗೆ ಕರೆ ನೀಡಿದ್ದಾರೆ. ಪ್ರಾರ್ಥನಾ ಗೃಹವು ಸಿದ್ಧವಾಗಿದ್ದು, ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಆದರೆ, ದೇವಾಲಯ ಸಂಪೂರ್ಣವಾಗಿ ನಿರ್ಮಾಣವಾಗಲು ಇನ್ನೂ ಒಂದೆರಡು ವರ್ಷ ಹಿಡಿಯಲಿದೆ ಎಂದು ರಾಯ್ ಮಾಹಿತಿ ನೀಡಿದ್ದಾರೆ. ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನಾ ದಿನವಾದ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದು, ಉತ್ತರ ಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.