ರಾಜ್ಯಸಭಾ ಚುನಾವಣೆ- ಸೋನಿಯಾ, ನಡ್ಡಾ ಸೇರಿ 41 ಮಂದಿ ಅವಿರೋಧ ಆಯ್ಕೆ- ಫೆ.27ರಂದು 15 ಸ್ಥಾನಗಳಿಗೆ ಮತದಾನ

ಮಂಗಳೂರು: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಎಲ್.ಮುರುಗನ್ ಮತ್ತು ಬಿಜೆಪಿಯ ಅಶೋಕ್ ಚವಾಣ್ ಸೇರಿದಂತೆ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶದ ಉಳಿದ 15 ಸ್ಥಾನಗಳಿಗೆ ಫೆಬ್ರವರಿ 27 ರಂದು ಮತದಾನ ನಡೆಯಲಿದೆ.

ಬಿಜೆಪಿ 20, ಕಾಂಗ್ರೆಸ್ 6, ತೃಣಮೂಲ ಕಾಂಗ್ರೆಸ್ 4, ವೈಎಸ್ಆರ್ ಕಾಂಗ್ರೆಸ್ 3, ಆರ್ ಜೆಡಿ 2, ಬಿಜೆಡಿ 2, ಎನ್ ಸಿಪಿ, ಶಿವಸೇನೆ, ಬಿಆರ್ ಎಸ್ ಮತ್ತು ಜೆಡಿಯು ತಲಾ 1 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದಂದು ಚುನಾವಣಾಧಿಕಾರಿಗಳು, ಈ ಸ್ಥಾನಗಳಿಗೆ ಬೇರೆ ಯಾವುದೇ ಸ್ಪರ್ಧಿಗಳು ಇಲ್ಲದೆ ಇರುವುದರಿಂದ ಈ 41 ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಿದ್ದಾರೆ.

ಫೆ.27 ರಂದು ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಉತ್ತರ ಪ್ರದೇಶದ 10, ಕರ್ನಾಟಕದ 4 ಮತ್ತು ಹಿಮಾಚಲ ಪ್ರದೇಶದ 1 ಸ್ಥಾನಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ರಾಜ್ಯಸಭೆಯ 50 ಸದಸ್ಯರು ಏಪ್ರಿಲ್ 2 ರಂದು ಮತ್ತು ಆರು ಸದಸ್ಯರು ಏಪ್ರಿಲ್ 3 ರಂದು ನಿವೃತ್ತರಾಗಲಿದ್ದಾರೆ.

LEAVE A REPLY

Please enter your comment!
Please enter your name here