ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಬಾಂಬ್ ಬೆದರಿಕೆ ಇ-ಮೇಲ್ – ಎಫ್ಐಆರ್ ದಾಖಲು

ಮಂಗಳೂರು/ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದ ಮರುದಿನ ಬಸ್ಸು, ರೈಲು, ದೇವಸ್ಥಾನ, ಹೋಟೆಲ್‌ಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬೆದರಿಕೆ ಇ-ಮೇಲ್ ರವಾನಿಸಿರುವ  ವಿಚಾರ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಮಧ್ಯಾಹ್ನ 2:48ಕ್ಕೆ ಇ-ಮೇಲ್ ಕಳುಹಿಸಲಾಗಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಾಹಿದ್ ಖಾನ್ ಹೆಸರಿನಲ್ಲಿ ಇ-ಮೇಲ್ ಬಂದಿದೆ.

ಸ್ವಿಜರ್ಲೆಂಡ್ ಮೂಲದ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಇ-ಮೇಲ್ ಸರ್ವಿಸ್ ಬಳಸಿರುವ ಆರೋಪಿ ಶಾಹಿದ್ ಖಾನ್ ಹೆಸರಿನಿಂದ ಮೇಲ್ ರವಾನಿಸಿದ್ದಾನೆ. ಕರ್ನಾಟಕ ಸರ್ಕಾರ, ಮುಖ್ಯಮಂತ್ರಿಗಳು, ಗೃಹಸಚಿವರು, ಅಡ್ಮಿನ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಸೇರಿದಂತೆ ವಿವಿಧ ಅಧಿಕೃತ ಖಾತೆಗಳಿಗೆ ಇ-ಮೇಲ್ ರವಾನಿಸಲಾಗಿದೆ.

ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯವನ್ನು ಇ-ಮೇಲ್‌ನಲ್ಲಿ ಟ್ರೈಲರ್ ಎಂದು ಉಲ್ಲೇಖಿಸಲಾಗಿದೆ. 2.5 ಮಿಲಿಯನ್ ಡಾಲರ್ ಹಣ ಕೊಡದಿದ್ದರೆ ಕರ್ನಾಟಕದಾದ್ಯಂತ ಬಸ್, ರೈಲು, ಟ್ಯಾಕ್ಸಿ, ದೇವಾಲಯ, ಹೋಟೆಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಸಂದೇಶ ಇ-ಮೇಲ್​ನಲ್ಲಿದೆ. ಎರಡನೇ ಟ್ರೈಲರ್ ತೋರಿಸಲು ನಾವು ಸಜ್ಜಾಗಿದ್ದು, ಅಂಬಾರಿ ಉತ್ಸವ್ ಬಸ್‌ನಲ್ಲಿ ಸ್ಫೋಟಿಸಲಾಗುವುದು. ತಮ್ಮ ಬೇಡಿಕೆಗಳು, ಮುಂದಿನ ನಡೆ ಹಾಗೂ ಸದ್ಯ ಕಳಿಸಲಾಗಿರುವ ಮೇಲ್ ಸಂದೇಶದ ಸ್ಕ್ರೀನ್ ಶಾಟ್​​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು ಎಂದೂ ಇ-ಮೇಲ್​​ ಸಂದೇಶದಲ್ಲಿದೆ.

LEAVE A REPLY

Please enter your comment!
Please enter your name here