ಮಹಿಳೆ ಹತ್ಯೆ-ಚಿನ್ನಾಭರಣ ಮತ್ತು ಕಾರು ಸಮೇತ ದುಷ್ಕರ್ಮಿಗಳು ಪರಾರಿ

ಮಂಗಳೂರು(ಬೆಂಗಳೂರು): ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಎಂ.ಶೋಭಾ (48) ಎಂಬುವವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.‌

ಸ್ಥಳೀಯ ಗಣೇಶನಗರದ ಶೋಭಾ, ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದು, ಎರಡನೇ ಮಗಳ ಜೊತೆ ವಾಸವಿದ್ದರು. ಮಗಳು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶೋಭಾ ಅವರ ಮಾಂಗಲ್ಯ ಸರ, ಚಿನ್ನದ ಸರ, ಮೊಬೈಲ್ ಅನ್ನು ದೋಚಿರುವ ದುಷ್ಕರ್ಮಿಗಳು, ಮನೆ ಎದುರು ಕಾರಿನ ಸಮೇತ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆ ಇದೆ. ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಶೋಭಾ ಹಾಗೂ ಎರಡನೇ ಮಗಳು ಹರ್ಷಿತಾ ಮಾತ್ರ ಮನೆಯಲ್ಲಿ ವಾಸವಿದ್ದರು. ಶೋಭಾ ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹರ್ಷಿತಾ ಅವರಿಗೆ ಏಪ್ರಿಲ್ 4ರಂದು ಮದುವೆಯಾಗಿತ್ತು. ಮದುವೆಯ ಸಂಪ್ರದಾಯಗಳು ನಡೆಯುತ್ತಿರುವುದರಿಂದ ಹರ್ಷಿತಾ ತಾಯಿಯ ಮನೆಯಲ್ಲಿದ್ದರು. ಏಪ್ರಿಲ್ 18ರಂದು ಜೆ.ಪಿ. ನಗರದಲ್ಲಿರುವ ಪತಿಯ ಮನೆಗೆ ಹೋಗಿದ್ದರು. ಮರುದಿನ ತಾಯಿ ಶೋಭಾಗೆ ಕರೆ ಮಾಡಿದ್ದರು. ಆದರೆ, ತಾಯಿ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡು ಅಕ್ಕ ಹಾಗೂ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಕ್ಕ ಮನೆಗೆ ಹೋಗಿ ನೋಡಿದಾಗ, ಬೆಡ್ ಮೇಲೆ ಶೋಭಾ ಮೃತದೇಹ ಕಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ. ಶೋಭಾ ಅವರನ್ನು ಯಾರೋ ಕೊಲೆ ಮಾಡಿ ಚಿನ್ನಾಭರಣ–ಕಾರು ದೋಚಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮನೆಯ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ.

LEAVE A REPLY

Please enter your comment!
Please enter your name here