ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

ಮಂಗಳೂರು(ಬಂಟ್ವಾಳ): ನೇತ್ರಾವತಿ ನದಿಯಲ್ಲಿ ಇಬ್ಬರು ಬಾಲಕಿಯರು ಮನೆ ಮಂದಿಯ ಎದುರಲ್ಲೇ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಮೈಂದಾಳ ಎಂಬಲ್ಲಿ ಭಾನುವಾರ(ಮೇ.6) ಸಂಜೆ ನಡೆದಿದೆ.

ಮೃತರನ್ನು ಉಳ್ಳಾಲ ನಿವಾಸಿ ಅನ್ಸಾರ್ ಎಂಬವರ ಪುತ್ರಿ ಅಶ್ರಾ (11) ಹಾಗೂ ಸ್ಥಳೀಯ ನಿವಾಸಿ ಇಲ್ಯಾಸ್‌ ಎಂಬವರ ಪುತ್ರಿ ಮರಿಯಂ ನಾಶೀಯಾ (14) ಎಂದು ಗುರುತಿಸಲಾಗಿದೆ. ಮೂಲತಃ ನಾವೂರು ನಿವಾಸಿಯಾಗಿದ್ದು, ಪ್ರಸ್ತುತ ಉಳ್ಳಾಲದಲ್ಲಿ ವಾಸವಾಗಿರುವ ಅನ್ಸಾ‌ರ್ ಕುಟುಂಬ ಶಾಲಾ ರಜೆ ಹಿನ್ನಲೆಯಲ್ಲಿ ನಾವೂರು ಗ್ರಾಮದ ಮೈಂದಾಳ ಎಂಬಲ್ಲಿರುವ ಸಂಬಂಧಿಕರ ಮನೆಗೆ ಬಂದವರು ಭಾನುವಾರ(ಮೇ.6) ಸಂಜೆ ಇಲ್ಲಿನ ನೀರಕಟ್ಟೆ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಆಟವಾಡಲು ಇಲ್ಯಾಸ್ ಕುಟುಂಬದ ಜೊತೆ ತೆರಳಿದ್ದರು. ಮನೆ ಮಂದಿ ಕೂಡಾ ಈ ಸಂದರ್ಭ ಅಲ್ಲೇ ಮಕ್ಕಳು ಆಟವಾಡುವುದನ್ನು ನೋಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಠಾತ್ ಆಗಿ ಬಾಲಕಿಯರಿಬ್ಬರು ನೀರಿನಲ್ಲಿ ಮುಳುಗಿದ್ದು, ಸ್ಥಳದಲ್ಲಿದ್ದ ಮನೆ ಮಂದಿಯಲ್ಲಿ ಯಾರಿಗೂ ಈಜು ಬಾರದ ಕಾರಣ ಮುಳುಗುತ್ತಿರುವ ಬಾಲಕಿಯರನ್ನು ರಕ್ಷಿಸಲು ಸಾಧ್ಯವಾಗದೆ ಮನೆ ಮಂದಿಯ ಕಣ್ಣೆದುರೆ ಬಾಲಕಿಯರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here