ಹಾಸನದ ʼಪೆನ್‍ಡ್ರೈವ್ʼ ಪ್ರಕರಣದ ರೂವಾರಿ ಡಿ.ಕೆ.ಶಿವಕುಮಾರ್-ದೇವರಾಜೇಗೌಡ ಆರೋಪ – ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ-ಡಿ.ಕೆ. ಶಿವಕುಮಾರ್

ಮಂಗಳೂರು(ಬೆಂಗಳೂರು): ಹಾಸನದ ಪೆನ್‍ಡ್ರೈವ್ ಪ್ರಕರಣದ ರೂವಾರಿ ಹಾಗೂ ಕಥಾನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಿದ್ದು, ಪ್ರಧಾನಿ ಮೋದಿಗೆ ಕಪ್ಪುಮಸಿ ಬಳಿಯಲೆಂದು ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋದ ಪೆನ್‍ಡ್ರೈವ್ ಪಡೆದುಕೊಂಡು ಲೋಕಸಭಾ ಚುನಾವಣೆಯ ಮತದಾನಕ್ಕೆ 3 ದಿನ ಇರುವಾಗ ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.

ಸೋಮವಾರ(ಮೇ.6) ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸರಕಾರ ಹಾಗೂ ಕಾಂಗ್ರೆಸ್‍ನ ನಾಯಕರಿಗೆ ರೇವಣ್ಣ ವಿಚಾರ ಬೇಕಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಹಾಗೂ ನೇರವಾಗಿ ಮೋದಿಯವರು ಇಂತಹವರಿಗೆ ರಕ್ಷಣೆ ನೀಡುತ್ತಿದ್ದಾರೆಂದು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡುವುದು ಬೇಕಾಗಿದೆ. ಇದಕ್ಕಾಗಿ ಡಿ.ಕೆ. ಶಿವಕುಮಾರ್, ಎಲ್.ಆರ್.ಶಿವರಾಮೇಗೌಡರನ್ನು ಕಳುಹಿಸಿ ನನ್ನನ್ನು ಅವರೊಂದಿಗೆ ಕೈಜೋಡಿಸಲು ಕೇಳಿಕೊಂಡಿದ್ದರು ಎಂದರು. ಎಲ್.ಆರ್.ಶಿವರಾಮೇಗೌಡ ಮಧ್ಯಸ್ಥಿಕೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಸಂಪರ್ಕಿಸಿದ್ದರು. ಶಿವರಾಮೇಗೌಡ ನನ್ನ ಬಳಿ 10 ಬಾರಿ ಸಂಧಾನಕ್ಕೆ ಕಳುಹಿಸಿದ್ದಾರೆ. ಶಿವರಾಮೇಗೌಡರು ಬಂದು ‘ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡ, ನೀನು ಸರಕಾರದ ಪರವಾಗಿ ಇರಬೇಕು. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ’ ಎಂಬುದಾಗಿ ಕೇಳಿಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಂತೆಯೇ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮೋದಿಯವರ ಮುಖಕ್ಕೆ ಮಸಿ ಬಳಿಯಲು ಡಿ.ಕೆ.ಶಿವಕುಮಾರ್ ಈ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಮ್ಮೊಂದಿಗೆ ಕೈಜೋಡಿಸಿದರೆ ನಿನಗೆ ಎಲ್ಲ ರೀತಿಯ ಸಹಕಾರ ಮಾಡುತ್ತೇವೆ ಎಂದು ನನ್ನನ್ನು ಕರೆದಿದ್ದಾರೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಪ್ರಜ್ವಲ್ ರೇವಣ್ಣ, ಮಾಜಿ ಕಾರು ಚಾಲಕ ಕಾರ್ತಿಕ್ ಅವರೊಂದಿಗೆ ಇರುವುದಾಗಿ ಎಲ್.ಆರ್. ಶಿವರಾಮೇಗೌಡ ಅವರೇ ಹೇಳಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅವರು ನನ್ನೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದ ಸಂಭಾಷಣೆಯಿದೆ ಎಂದು ದೇವರಾಜೇಗೌಡ ಅವರು ಆಡಿಯೋ ತುಣುಕನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ್ದಾರೆ.

ಇದರಲ್ಲಿ ಮುಖ್ಯವಾಗಿ ಮೋದಿ ಅವರನ್ನು ಟಾರ್ಗೆಟ್ ಮಾಡಲಾಗಿದೆ. ವಿಡಿಯೋ ಹಂಚಿಕೆ ವಿಚಾರವಾಗಿ ಈಗ ನನ್ನನ್ನೇ ಎ1 ಆರೋಪಿಯಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಇವರು ಸಂತ್ರಸ್ತರಿಗೆ ಹಣ ಕೊಟ್ಟು ಕರೆದುಕೊಂಡು ಬರುತ್ತಿದ್ದಾರೆ. ಹಾಸನದ ಯಾವ ಹೋಟೆಲ್‍ನಲ್ಲಿ ಸಂತ್ರಸ್ತೆಯರೊಂದಿಗೆ ಎಷ್ಟು ಗಂಟೆ ಮಾತನಾಡಿದ್ದಾರೆ ಅನ್ನುವುದು ಸಿಸಿಟಿವಿಯಲ್ಲಿ ಗೊತ್ತಾಗಿದೆ. ರಾಜ್ಯ ಸರಕಾರ ಪ್ರಕರಣ ದಿಕ್ಕುನ್ನೇ ಬದಲಾಯಿಸುತ್ತಿದೆ ಎಂದು ದೇವರಾಜೇಗೌಡ ಹೇಳಿದ್ದಾರೆ. ಈಗ ಹರಿದಾಡುತ್ತಿರುವ ವಿಡಿಯೋಗಳ್ಯಾವುವು ನನ್ನ ಬಳಿ ಇರುವ ಪೆನ್‍ಡ್ರೈವ್‍ನದ್ದಲ್ಲ ಎಂದು ದೇವರಾಜೇಗೌಡ ಸ್ಪಷ್ಟಪಡಿಸಿದರು. ಇನ್ನು ಪೆನ್‍ಡ್ರೈವ್ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ತಮ್ಮ ಪರವಾಗಿ ಸಹಕರಿಸುವಂತೆ ನನಗೆ ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಎಲ್.ಆರ್.ಶಿವರಾಮೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಪ್ರಕರಣದ ವಿಚಾರವಾಗಿ ನನ್ನ ಬಳಿ ಚರ್ಚೆ ನಡೆಸಿದ್ದರು. ಪೆನ್‍ಡ್ರೈವ್ ಲೀಕ್ ಮೂಲಕ ಈಗ ಎಚ್.ಡಿ.ದೇವೇಗೌಡ ಅವರನ್ನು ಫಿಕ್ಸ್ ಮಾಡಲು ನೋಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನನಗೂ, ಪೆನ್‌ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪಿಸಿರುವ ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೂ, ಪೆನ್‌ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪಿಸಿರುವ ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ. ಹೀಗಾಗಿ ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಲಾಗಿದೆ, ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ. ದೇವರಾಜೇಗೌಡ ಈ ಹಿಂದೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ದೇವರಾಜೇಗೌಡ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್, ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು. ದೇವರಾಜೇಗೌಡ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here