ನೀಟ್-ಯುಜಿ 2024ರ ಪರೀಕ್ಷೆಯಲ್ಲಿ ಅಕ್ರಮ- ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳಿಗೆ ರ‍್ಯಾಂಕ್‌

ಮಂಗಳೂರು (ಹೊಸದಿಲ್ಲಿ): ನೀಟ್-ಯುಜಿ 2024ರ ಫಲಿತಾಂಶದಲ್ಲಿ ಕೆಲವು ಅಚ್ಚರಿದಾಯಕ ಅಂಶಗಳು ಬಹಿರಂಗಗೊಂಡ ಬಳಿಕ ಹಲವರು ಮತ್ತು ನೀಟ್ ಆಕಾಂಕ್ಷಿಗಳ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. 67 ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕ ಗಳಿಕೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳ ಆರೋಪಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಗಳಿಸಿರುವವರ ಪೈಕಿ ಆರು ಅಭ್ಯರ್ಥಿಗಳು ಹರಿಯಾಣದ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು ಮತ್ತು ಅವರ ಅನುಕ್ರಮ ಸಂಖ್ಯೆಗಳು ಒಂದೇ ಆಗಿದ್ದವು ಎನ್ನುವ ಅಚ್ಚರಿಯ ಅಂಶವು ಬಹಿರಂಗಗೊಂಡಿದೆ. ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅನೇಕ ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಗಳಿಸಿರುವುದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂಬುವುದಕ್ಕೆ ಸಾಕ್ಷಿಯಾಗಿದೆ. ಪೋಷಕರು ಪರೀಕ್ಷೆಗೆ ಸಂಬಂಧಿಸಿದಂತೆ ಬಹಿರಂಗಗೊಂಡಿರುವ ಅಂಶಗಳಲ್ಲಿಯ ವೈಪರೀತ್ಯಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಬರೆದಿರುವ ಪತ್ರಗಳಲ್ಲಿ ಕೋರಿದ್ದಾರೆ.

718 ಮತ್ತು 719 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಅಂಕಪಟ್ಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪ್ರತಿ ನೀಟ್ ಪ್ರಶ್ನೆಗೆ ನಾಲ್ಕು ಅಂಕಗಳು ಮತ್ತು ಒಂದು ಋಣಾತ್ಮಕ ಅಂಕವಿರುವಾಗ ಇದು ತಮಗೆ ಮನದಟ್ಟಾಗಿಲ್ಲ ಎಂದು ಪೋಷಕರು ವಾದಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರರೋರ್ವರು, ‘ಅಂಕ ಪದ್ಧತಿಗಳು ಬದಲಾಗಿರದಿದ್ದರೆ ಯಾರೇ ಆದರೂ 718 ಮತ್ತು 719 ಅಂಕಗಳನ್ನು ಗಳಿಸಲು ಹೇಗೆ ಸಾಧ್ಯ? ಇದು ಎನ್‌ಟಿಎಯ ಬಹು ದೊಡ್ಡ ಹಗರಣವಾಗಿದೆ’ ಎಂದು ಬರೆದಿದ್ದಾರೆ. ಈ ನಡುವೆ ಪ್ರಶ್ನೆಪತ್ರಿಕೆ ಸೋರಿಕೆಯ ವರದಿಗಳು, ಕಳೆದುಕೊಂಡ ಸಮಯಕ್ಕಾಗಿ ಕೊನೇ ಕ್ಷಣದಲ್ಲಿ ನೀಡಲಾದ ಕೃಪಾಂಕಗಳು ಮತ್ತು 2024ರ ನೀಟ್ ಫಲಿತಾಂಶಗಳಲ್ಲಿ ತಪ್ಪುಗಳಿಂದಾಗಿ ಗಣನೀಯ ಸಂಖ್ಯೆಯ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳು ನೀಟ್ ಮರುಪರೀಕ್ಷೆಗಾಗಿ ಆಗ್ರಹಿಸತೊಡಗಿದ್ದಾರೆ.ಆದರೆ ಎನ್‌ಟಿಎ ನೀಟ್ ಯುಜಿ 2024ರ ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳನ್ನು ನಿರಾಕರಿಸಿದೆ.

2024ರ ನೀಟ್-ಯುಜಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾಗಿರುವ ಅವ್ಯವಹಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯಿಸಿ 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಕಲ್ಕತ್ತಾ ಉಚ್ಚನ್ಯಾಯಾಲಯವು ಎನ್‌ಟಿಎಗೆ ಸೂಚಿಸಿದೆ. ಅನ್ವಯವಾಗುವ ಅಂಕ ಪದ್ಧತಿಯ ಪ್ರಕಾರ ಕೆಲವು ಅಭ್ಯರ್ಥಿಗಳು ಗರಿಷ್ಠ 720 ಅಂಕಗಳ ಪೈಕಿ 718 ಅಥವಾ 719 ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪತ್ತೆಯಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮೋದಿ ಸರಕಾರವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸುವ ಮೂಲಕ ವಿದ್ಯಾರ್ಥಿಗಳ ‘ಕಾನೂನುಬದ್ಧ ದೂರುಗಳನ್ನು’ ಪರಿಹರಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here