ಬಂಟ್ವಾಳ: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ

ಪುತ್ತೂರು: ಬಿ.ಮೂಡ ಬಂಟ್ವಾಳ ಸರಕಾರಿ ಪದವಿ ಪೂರ್ವ ಕಾಲೇಜು ಮೂಡ ಬಂಟ್ವಾಳದಲ್ಲಿ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮಂಗಳೂರು, ದ.ಕ.ಜಿಲ್ಲಾ ಪ್ರಾಂಶುಪಾಲರ ಸಂಘ ಮಂಗಳೂರು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ, ಬಂಟ್ವಾಳ ಇವುಗಳ ಸಹಯೋಗದಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಜರುಗಿತು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಇದರ ಉಪನಿರ್ದೇಶಕರು ಸಿ. ಡಿ. ಜಯಣ್ಣ ಇವರು ವಹಿಸಿದ್ದರು.

ಇವರು ದ.ಕ. ಜಿಲ್ಲೆಯ ಶೈಕ್ಷಣಿಕ ಕ್ಷೇತ್ರವು ಮುಂಚೂಣಿಯಲ್ಲಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳು 1೦೦% ಫಲಿತಾಂಶ ಸಾಧಿಸುವಲ್ಲಿ ನಾವೆಲ್ಲ ಪ್ರಯತ್ನಿಸೋಣ. ಸಮಾಜಶಾಸ್ತ್ರ ಉಪನ್ಯಾಸಕರು ಸಾಮಾಜಿಕ ಕಳಕಳಿಯಿಂದ ಸಮಾಜದ ಏಳಿಗೆಗೆ ಶ್ರಮಿಸಿ, ಮಾನವ ಸಂಬಂಧವನ್ನು ಕಾಪಾಡುವಲ್ಲಿ, ವೃದ್ಧಿಸುವಲ್ಲಿ ಸಮಾಜಶಾಸ್ತ್ರ ವಿಷಯದ ಪಾತ್ರ ಮಹತ್ತರವಾದದ್ದು ಎಂದು ಅರಿತು ದುಡಿಯಬೇಕೆಂದು ಆಶಿಸಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜಯಾನಂದ ಜೆ. ಸುವರ್ಣ, ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಇವರು ಸಮಾಜ ಶಾಸ್ತ್ರ ವಿಷಯದ ಉಪನ್ಯಾಸಕರು ಸಾಮಾಜಿಕ ವಿದ್ಯಮಾನಗಳನ್ನು ವಿಮರ್ಶಾತ್ಮಕವಾಗಿ ಅರಿತು ಸಮಾಜದ ಏಳಿಗೆಗೆ ಸಮಾಜ ವಿಜ್ಞಾನಿಗಳ ನೆಲೆಯಲ್ಲಿ ದುಡಿಯುವಂತೆ ಆಶಿಸಿದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಪ್ರಾಚಾರ್ಯ ಸಂಘ ಮಂಗಳೂರು ಇದರ ಕಾರ್ಯದರ್ಶಿ ಅನಸೂಯ, ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇದರ ಪ್ರಾಂಶುಪಾಲರಾದ ಯೂಸುಫ್ ವಿಟ್ಲ ,ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಡಾ. ಪುರುಷೋತ್ತಮ ಬೆಂಗಳೂರು ಹಾಗೂ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾದ ಜಿನ್ಸಿ ಜೋಸೆಫ್ ಉಪಸ್ಥಿತರಿದ್ದರು.

ಪದೋನ್ನತಿಗೊಂಡ ಪ್ರಾಂಶುಪಾಲರಾದ ಗಾಯತ್ರಿ, ಸ್ವಾಮಿ ವಿವೇಕಾನಂದ ಕಾಲೇಜು ಎಡಪದವು, ಮಾಲಿನಿ,ಸ್ವಾಮಿ ನಿರಂಜನ ಪದವಿಪೂರ್ವ ಕಾಲೇಜು ಸುಂಕದಕಟ್ಟೆ ಹಾಗೂ ಸುಬ್ರಹ್ಮಣ್ಯಭಟ್, ತುಂಬೆ ಪದವಿಪೂರ್ವ ಕಾಲೇಜು ತುಂಬೆ ಇವರನ್ನು ಸನ್ಮಾನಿಸಲಾಯಿತು. ಹಾಗೆಯೇ ವಿಶೇಷ ಸಾಧನೆಗೈದ ಉಪನ್ಯಾಸಕರಾದ ಸುಜಾತಶೆಟ್ಟಿ, ಮಹಾವೀರ ಕಾಲೇಜು ಮೂಡಬಿದಿರೆ ಮತ್ತು ರವಿಚಂದ್ರ, ಸರಕಾರಿ ಪದವಿ ಪೂರ್ವ ಕಾಲೇಜು ಕೃಷ್ಣಾಪುರ, ಸುರತ್ಕಲ್‌ ಇವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ನೂರಕ್ಕೆನೂರು (100/100) ಅಂಕ ಪಡೆದ ವಿದ್ಯಾರ್ಥಿಗಳಾದ ಅಮಿತ್ ಶುಕ್ಲಾ ತುಂಬೆ ಪದವಿಪೂರ್ವ ಕಾಲೇಜು, ಝೈಬುನ್ನೀಸ, ಆಯಿಷ ಕಾಲೇಜು ಅಲಂಕಾರು, ಅರ್ಪಿತಾ, ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಖುಷಿ ಮತ್ತು ಅನಿಕಾ, ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು, ಪ್ರಗತಿರಾವ್ ಬನ್ನೇರಿ, ಸಂತ ಎಲೋಶಿಯಸ್ ಕಾಲೇಜು , ಮಂಗಳೂರು, ಹಜರತ್ ರೈಸಾ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಫಿಝಾ, ಎಸ್.ವಿ.ಕಾಲೇಜು ಎಡಪದವು ಇವರನ್ನು ಸನ್ಮಾನಿಸಲಾಯಿತು. ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ಅಶೋಕ ಪಿ.ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷೆ ಜಿನ್ಸಿ ಜೋಸೆಫ್ ಸ್ವಾಗತಿಸಿ, ಸಂಘದ ಕೋಶಾಧಿಕಾರಿ ಉದಯಎಸ್.ಕೆ. ವಂದಿಸಿದರು. ಸಂಘದ ಉಪಾಧ್ಯಕ್ಷ ಡಾ. ರೇಖಾಬಿ.ಎಸ್.ಕಾರ್ಯಕ್ರಮದ ಅಧ್ಯಕ್ಷರಾದ ಸಿ.ಡಿ.ಜಯಣ್ಣರನ್ನು ಗೌರವಿಸುವ ಕಾರ್ಯಕ್ರಮವನ್ನು ನೆರವೇರಿಸಿದರು. ಜಿಲ್ಲೆಯ ಸಮಾಜ ಶಾಸ್ತ್ರ ಉಪನ್ಯಾಸಕರು, ನಿವೃತ್ತ ಪ್ರಾಂಶುಪಾಲರುಗಳು, ನಿವೃತ್ತ ಉಪನ್ಯಾಸಕರುಗಳು ಮತ್ತು ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here