ಸೊರಬದಲ್ಲಿ ಎರಡು ಬೈಕ್ ಗಳ ಮುಖಾಮುಖಿ ಢಿಕ್ಕಿ ಓರ್ವ ಮೃತ್ಯು-ಹಾಸನದಲ್ಲಿ ರಸ್ತೆ ಅಪಘಾತ ಬೈಕ್‌ ಸವಾರ ಮೃತ್ಯು-ಕಾಸರಗೋಡಿನಲ್ಲಿ ವಿದ್ಯುತ್ ಶಾಕ್ ನಿಂದ ಯುವಕ ಮೃತ್ಯು

ಮಂಗಳೂರು(ಶಿವಮೊಗ್ಗ): ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಶುಕ್ರವಾರ ಸಂಜೆ ಸೊರಬದಲ್ಲಿ ನಡೆದಿದೆ. ಸೊರಬ ತಾಲೂಕಿನ ಕಣ್ಣೂರು ಗ್ರಾಮದ ನಿವಾಸಿ ಶಿವಪ್ಪ(45) ಮೃತಪಟ್ಟ ಬೈಕ್ ಸವಾರ. ಸೊರಬ ತಾಲೂಕಿನ ಉಳವಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಸೊರಬ-ಸಾಗರ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇನ್ನೊಂದು ಬೈಕ್ ಸವಾರ ಕೂಡಾ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಹಿಂದಿನಿಂದ ಬಂದ ವಾಹನಗಳು ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಚನ್ನರಾಯಪಟ್ಟಣ ಬೈಪಾಸ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ನಗರದ ಗೌರಿ ಕೊಪ್ಪಲಿನ ರಾಕೇಶ್ (27) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಈತ ತನ್ನ ಕೆಟಿಎಂ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಬೈಕ್ ಅತಿ ವೇಗವಾಗಿದ್ದ ಕಾರಣ ಅಪಘಾತವುಂಟಾಗಿದೆ ಎನ್ನಲಾಗಿದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮೂರ್ನಾಲ್ಕು ವಾಹನಗಳು ನಿಯಂತ್ರಣ ಸಾಧ್ಯವಾಗದೆ ಆತನ ಮೇಲೆ ಹರಿದಿದ್ದು, ಇದರಿಂದ ಸ್ಥಳದಲ್ಲೇ ಆತ ಪ್ರಾಣ ಕಳೆದುಕೊಂಡಿದ್ದಾನೆ. ಆದರೆ ರಾಕೇಶ್ ಮೇಲೆ ಹರಿದ ಇತರ ವಾಹನಗಳೆಲ್ಲವೂ ನಿಲ್ಲಿಸದೆ ಪರಾರಿಯಾಗಿವೆ ಎಂದು ತಿಳಿದು ಬಂದಿದೆ. ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವು ಎಂಬಲ್ಲಿ ಶುಕ್ರವಾರ ನಡೆದಿದೆ. ಅಂಗಡಿಪದವಿನ ಪ್ರಜ್ವಲ್ (19) ಮೃತಪಟ್ಟ ಯುವಕ. ಬೈಕ್ ಗ್ಯಾರೇಜೊಂದರಲ್ಲಿ ದುಡಿಯುತ್ತಿದ್ದ ಪ್ರಜ್ವಲ್ ಗೆ ಶಾಕ್ ತಗಲಿದ್ದು, ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ವಿದ್ಯುತ್ ವಯರನ್ನು ತೆಗೆದು ಯುವಕನನ್ನು ಉಪ್ಪಳದ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ. ಈ ಬಗ್ಗೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here