ಟ್ಯಾಂಕರ್ ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ-ಈಚರ್‌ ಕಂಟೇನರ್‌ ಲಾರಿ ಚಾಲಕನಿಗೆ ಗಂಭೀರ ಗಾಯ-ಚಾಲಕನನ್ನು ಹೊರ ತೆಗೆಯಲು ಹರ ಸಾಹಸ ಪಟ್ಟ ಸ್ಥಳೀಯ ಯುವಕರು

ಮಂಗಳೂರು(ಉಪ್ಪಿನಂಗಡಿ): ಟ್ಯಾಂಕರ್ ಮತ್ತು ಈಚರ್‌ ಕಂಟೇನರ್‌ ಲಾರಿ ಮದ್ಯೆ ಭೀಕರ ಅಪಘಾತ ಸಂಭವಿಸಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಮಯಿರ ಎಂಬಲ್ಲಿ ಈ ಘಟನೆ ನಡೆದಿದ್ದು ಈಚರ್‌ ಕಂಟೇನರ್‌ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಸರಕು ತುಂಬಿಸಿ ಮಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಈಚರ್‌ ಕಂಟೇನರ್‌ ಲಾರಿ ಪೆರ್ನೆಯ ಮಯಿರ ಬಳಿ ಅಳವಡಿಸಲಾಗಿದ್ದ ರಸ್ತೆ ಹಂಪ್‌ ನಲ್ಲಿ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟ್ಯಾಂಕರ್‌ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಈಚರ್‌ ಕಂಟೇನರ್‌ ಲಾರಿ ಮುಂಭಾಗ ನಜ್ಜುಗುಜ್ಜಾಗಿದ್ದು ಚಾಲಕನನ್ನು ಹೊರ ತೆಗೆಯಲು ಸ್ಥಳೀಯರು ಒಂದು ಗಂಟೆಗಿಂತಲೂ ಹೆಚ್ಚುಕಾಲ ಶ್ರಮ ಪಡಬೇಕಾಯಿತು.

ಸ್ಥಳೀಯ ಯುವಕರು ಹರಸಾಹಸಪಟ್ಟು ಚಾಲಕನನ್ನು ಹೊರ ತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಾಲಕ ತಲೆ, ಕೈ ಸೇರಿದಂತೆ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಟ್ಯಾಂಕರ್ ಚಾಲಕ‌ ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು, ಅವೈಜ್ಞಾನಿಕ ರಸ್ತೆ ಉಬ್ಬಿನಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

LEAVE A REPLY

Please enter your comment!
Please enter your name here