ಜು.9ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರು ಅಮೇರಿಕಕ್ಕೆ ಪ್ರಯಾಣ

ಮಂಗಳೂರು: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುಎಸ್‌ ಎ ಇದರ ಆಯೋಜನೆಯಲ್ಲಿ ಜು.9ರಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳಲಿದೆ.

ಅಮೇರಿಕಾದ 20 ರಾಜ್ಯಗಳ ಮುಖ್ಯ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಂಡದಲ್ಲಿ ಹಿಮ್ಮೇಳದ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಪ್ರೊ.ಎಂ ಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಹೀಗೆ ಒಂಬತ್ತು ಮಂದಿಯ ತಂಡ ಸುಮಾರು 75 ದಿವಸಗಳ ಕಲಾ ಪ್ರವಾಸ ಕೈಗೊಳ್ಳಲಿದೆ.
ಪುತ್ತಿಗೆ ಮಠ, ಕನ್ನಡ ಕೂಟ, ಯಕ್ಷಗಾನ ಸಂಘ, ದೇವಸ್ಥಾನ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ. ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ನಾವು ಪ್ರದರ್ಶನ ನೀಡಲಿದ್ದೇವೆ. ಕೆಲವು ಕಡೆ ಕಿರು ತರಬೇತಿ ಶಿಬಿರ ಪ್ರಾತ್ಯಕ್ಷಿಕೆಗಳನ್ನು ಕೂಡಾ ನಡೆಸಲಿದ್ದೇವೆ. ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಬಲು ವಿಜೃಂಭಣೆಯ ಅಕ್ಕ ಸಮ್ಮೇಳನದಲ್ಲಿಯೂ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ ಎನ್ನುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ ಡಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಮುಂತಾದ ಕಡೆ ಪ್ರದರ್ಶನಗೊಳ್ಳಲಿದ್ದು ಅನಿವಾಸಿ ಭಾರತೀಯರನ್ನು ರಂಜಿಸಲಿದ್ದೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ಪ್ರೊ. ಎಂ.ಎಲ್. ಸಾಮಗ, ಕಳೆದ 2023ರ ಜೂನ್ ಜುಲೈ ತಿಂಗಳಲ್ಲಿ ನಮ್ಮ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕರಾದ ವಾಸುದೇವ ಐತಾಳ್ ಪಣಂಬೂರು ಇವರ ನೇತೃತ್ವದಲ್ಲಿ ನಮ್ಮ ತಂಡವು ಯುರೋಪ್ ಖಂಡದ ಲಂಡನ್, ಸ್ಕಾಟ್ಲ್ಯಾಂಡ್, ಜರ್ಮನಿ ,ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಪ್ಯಾರಿಸ್ ಮುಂತಾದ ಕಡೆ ಕಾರ್ಯಕ್ರಮಗಳನ್ನು ನೀಡಿ ವಿದೇಶಿಗರಿಗೂ, ಭಾರತೀಯರಿಗೂ, ಕೆಲವು ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೂ ಯಕ್ಷಗಾನದ ಕಲೆಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಅಲ್ಲಿನ ಲೀಡ್ಸ್ ಹಾಗೂ ಡರ್ ಹಮ್ ಯುನಿವರ್ಸಿಟಿಗಳಲ್ಲಿ ಯಕ್ಷಗಾನ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಯೋಗ ಮತ್ತು ಕ್ರೀಡೆಗಳಲ್ಲೂ ಕಲೆ ಯಾವ ರೀತಿ ನಂಟು ಹೊಂದಿದೆ ಎಂಬುದನ್ನು ತೋರ್ಪಡಿಸಿ ಅಲ್ಲಿನ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿ ನೀಡಿ ಬೇರೆ ಬೇರೆ ದೇಶದಿಂದ ಬಂದ ವಿದ್ಯಾರ್ಥಿಗಳಿಂದ ನಮ್ಮ ಕಲೆಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ , ಪ್ರೊ ಎಂ ಎಲ್ ಸಾಮಗ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here